ಶಿವಮೊಗ್ಗ ಪಾಲಿಕೆ SKM Plaza ಸುಲ್ತಾನ್ ಗೋಲ್ಡ್ ಬಿಲ್ಡಿಂಗ್ ಆಸ್ತಿಯನ್ನು ತಕ್ಷಣ ತನ್ನ ಸುಪರ್ದಿಗೆ ಪಡೆದು ಕೊಳ್ಳಬೇಕು : ನಾಗರೀಕ ಹಿತರಕ್ಣಾ ವೇದಿಕೆ ಒತ್ತಾಯ
ಶಿವಮೊಗ್ಗ ನಗರದ ಹೃದಯ ಭಾಗದಲ್ಲಿ ದುರ್ಗಿಗುಡಿ ಮುಖ್ಯ ರಸ್ತೆಯಲ್ಲಿ ನಿರ್ಮಾಣಗೊಂಡಿರುವ SKM Plaza (ಸುಲ್ತಾನ್ ಗೋಲ್ಡ್ ಬಿಲ್ಡಿಂಗ್) ಆಸ್ತಿಯನ್ನು ಎಸ್.ಕೆ.ಮರಿಯಪ್ಪ, ಮಾಜಿ ಮೇಯರ್ ಮತ್ತು ಅವರ ಮಕ್ಕಳಾದ ಎಸ್.ಎಂ. ಶರತ್ ಮತ್ತು ಎಸ್.ಎಂ.ಅಭಿಲಾಷ್ ಅಕ್ರಮವಾಗಿ ಖಾತೆ ಮಾಡಿಸಿಕೊಂಡಿದ್ದಾರೆ ಎಂದು ನಾವು 2015 ರಲ್ಲಿ ಆರೋಪಿಸಿದ್ದೆವು.ಕೂಡಲೇ SKM Plaza (ಸುಲ್ತಾನ್ ಗೋಲ್ಡ್ ಬಿಲ್ಡಿಂಗ್) ಆಸ್ತಿಯನ್ನು ಪಾಲಿಕೆ ವಶಕ್ಕೆ ಪಡೆಯಬೇಕು ಎಂದು ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಯ ಒಕ್ಕೂಟ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ನಮ್ಮ ದೂರುಗಳ ನಂತರ ಅಂದಿನ ಜಿಲ್ಲಾಧಿಕಾರಿಗಳು, ನಿರ್ದೇಶಕರು ಪೌರಾಡಳಿತ ಇಲಾಖೆ ಬೆಂಗಳೂರು, ಖಾತಾ ರದ್ದುಗೊಳಿಸುವಂತೆ ಸೂಚಿಸಿದ್ದರು. ವಿಚಾರಣೆಯ ನಂತರ ನಿರ್ದೇಶಕರು ಪೌರಾಡಳಿತ ಇಲಾಖೆ, ಬೆಂಗಳೂರು 2017 ರಲ್ಲಿ ತಮ್ಮ ಆದೇಶದ ಮೂಲಕ ಎಸ್.ಕೆ.ಮರಿಯಪ್ಪ ಅವರ ಮಕ್ಕಳಾದ ಎಸ್.ಎಂ. ಶರತ್ ಮತ್ತು ಎಸ್.ಎಂ. ಅಭಿಲಾಷ್ ಅವರ ಖಾತಾ ರದ್ದುಗೊಳಿಸಿದ್ದರು.
ಈ ಆದೇಶದ ವಿರುದ್ಧ, ಎಸ್.ಎಂ.ಶರತ್ ಮತ್ತು ಎಸ್.ಎಂ.ಅಭಿಲಾಷ್ ಅವರು ಕರ್ನಾಟಕ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆ ಈ ದಾವೆಗೆ ಸಂಭಂದಿಸಿದ ಸಂಪೂರ್ಣ ದಾಖಲೆಗಳನ್ನು ಹೈ ಕೋರ್ಟ್ ಗೆ ಸಲ್ಲಿಸಿತ್ತು. ನಮ್ಮ ಪರವಾಗಿ ಹೈ ಕೋರ್ಟ್ ನ ಹಿರಿಯ ವಕೀಲ ಎಸ್.ವಿ.ಪ್ರಕಾಶ್ ವಾದಿಸಿದ್ದರು ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆ ಪರವಾಗಿ ವಕೀಲ ಗಂಗಾಧರಪ್ಪ ವಾದಿಸಿದ್ದರು. ವಾದ-ವಿವಾದ ಆಲಿಸಿ, ದೀರ್ಘ ವಿಚಾರಣೆ ನಂತರ ಕರ್ನಾಟಕ ಹೈಕೋರ್ಟ್ ರಿಟ್ ಅರ್ಜಿ4093/2017 ಅನ್ನು ವಜಾಗೊಳಿಸಿತು. ಕಾನೂನು ದುರುಪಯೋಗ ಹಾಗು ಭ್ರಷ್ಟ ಮಾರ್ಗದ ಮೂಲಕ ಈ ಆಸ್ತಿಯ ಖಾತೆ ಮಾಡಿ ಕೊಳ್ಳಲಾಗಿದೆ ಎಂದು ಈ ತೀರ್ಪು ಸ್ಪಷ್ಟ ಪಡಿಸಿದೆ.
ಈ ತೀರ್ಪು,SKN Plaza ಕಟ್ಟಡದ ಜಾಗ ಶಿವಮೊಗ್ಗ ಮಹಾನಗರ ಪಾಲಿಕೆಯ ಆಸ್ತಿ ಎಂದು ಸ್ಪಷ್ಟಪಡಿಸಿದೆ. ಈ ತೀರ್ಪಿನಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರು ತತ ಕ್ಷಣ ಆಸ್ತಿ ದಾಖಲೆಗಳನ್ನು ಪಾಲಿಕೆಯ ಹೆಸರಿಗೆ ಬದಲಿಸಬೇಕು ಮತ್ತು ಆಸ್ತಿಯನ್ನು ತಕ್ಷಣ ತನ್ನ ಸುಪರ್ದಿಗೆ ಪಡೆದು ಕೊಳ್ಳಬೇಕು ಎಂದು ತೀರ್ಪು ನೀಡಿದೆ.
ಹಾಗಾಗಿ ಈ ನಿಟ್ಟಿನಲ್ಲಿ ಕೆಳಕಂಡ ಕ್ರಮಗಳನ್ನು ಆಗ್ರಹಿಸುತ್ತೇವೆ;
1. ಆಯುಕ್ತರು ಯಾವುದೇ ವಿಳಂಬ ಮಾಡದೆ ಆಸ್ತಿಯನ್ನು ಪಾಲಿಕೆಯ ಹೆಸರಿಗೆ ದಾಖಲಿಸಬೇಕು.
2. ತಕ್ಷಣ ಆಸ್ತಿಯನ್ನು ಪಾಲಿಕೆಯ ಸುಪರ್ದಿಗೆ ತೆಗೆದು ಕೊಳ್ಳಬೇಕು .
3. ಸಾರ್ವಜನಿಕ ಆಸ್ತಿ ಕಬಳಿಕೆ ಮಾಡಿ ಕೋಟ್ಯಂತರ ಬಾಡಿಗೆ ಗಳಿಸಿದ ಆಸ್ತಿಯ ಖಾತೆದಾರರು ಹಾಗೂ ಖಾತೆ ಮಾಡಿದ ಪಾಲಿಕೆಯ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಸೂಕ್ತ ನ್ಯಾಯಲಯದಲ್ಲಿ ದಾಖಲಿಸಲು ಕ್ರಮ ತೆಗೆದು ಕೊಳ್ಳಬೇಕು .
ಈ ಎಲ್ಲಾ ಕ್ರಮಗಳನ್ನು ಆಯುಕ್ತರು ತ್ವರಿತಗತಿಯಲ್ಲಿ ಕೈಗೊಂಡು ಸಾರ್ವಜನಿಕ ಆಸ್ತಿಯ ರಕ್ಷಣೆ ಜೊತೆಗೆ ನಗರಕ್ಕೆ ನ್ಯಾಯ ಒದಗಿಸಬೇಕು. ಈ ಬಗ್ಗೆ ಆಯುಕ್ತರು ತೆಗೆದು ಕೊಳ್ಳುವ ಕ್ರಮದ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಬೇಕು ಎಂದು ಆಗ್ರಹಿಸುತ್ತೇವೆ. ಯಾವುದೇ ಕಾರಣಕ್ಕೂ ವಿಳಂಬ ನಾವು ಸಹಿಸುವುದಿಲ್ಲ ಎಂಬ ಎಚ್ಚರಿಕೆಯನ್ನೂ ಆಯುಕ್ತರಿಗೆ ಈ ಮೂಲಕ ನೀಡುತ್ತೇವೆ ಎಂದು ತಿಳಿಸಿದ್ದಾರೆ.

Leave a Comment