ಆಡೋನಹಳ್ಳಿ ಅಕ್ತಮ ಮರಳು ಗಣಿಗಾರಿಕೆ ಅಡ್ಡೆ ಮೇಲೆ.ತಡರಾತ್ರಿ ಮಹಿಳಾ ಅಧಿಕಾರಿಯ ದಿಢೀರ್ ದಾಳಿ!

ಶಿವಮೊಗ್ಗ, ಫೆಬ್ರವರಿ 5: ಶಿವಮೊಗ್ಗ ತಾಲೂಕಿನ ಹಾಡೋನಹಳ್ಳಿ ಗ್ರಾಮದ ತುಂಗಭದ್ರಾ ನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆ ಅಡ್ಡೆ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಹಿಳಾ ಅಧಿಕಾರಿ ಪ್ರಿಯಾ ಅವರು ದಿಢೀರ್ ದಾಳಿ ನಡೆಸಿದ ಘಟನೆ ಫೆ. 4 ರ ರಾತ್ರಿ ನಡೆದಿದೆ. 
ತಡರಾತ್ರಿ ಸರಿಸುಮಾರು 12. 30 ರ ವೇಳೆಗೆ ಈ ದಾಳಿ ನಡೆದಿದೆ. ಈ ವೇಳೆ ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದ ವಾಹನಗಳನ್ನು ವಶಕ್ಕೆ ಪಡೆಯಲು ಪ್ರಿಯಾ ಅವರು ಮುಂದಾಗಿದ್ದಾರೆ. 
ಆದರೆ ಕೆಲ ದಂಧೆಕೋರರು ವಾಹನ ನಿಲ್ಲಸದೆ ಸ್ಥಳದಿಂದ ಪರಾರಿಯಾಗಿದ್ದಾರೆ. ಆದಾಗ್ಯೂ ಸಿನಿಮೀಯ ಶೈಲಿಯಲ್ಲಿ ಜೆಸಿಬಿಯೊಂದನ್ನು ಪ್ರಿಯಾ ಅವರು ವಶಕ್ಕೆ ಪಡೆಯುವಲ್ಲಿ ಸಫಲರಾಗಿದ್ದಾರೆ ಎಂದು ತಿಳಿದುಬಂದಿದೆ. 
ತದನಂತರ ನಗರದ ಹೊರವಲಯ ಅಬ್ಬಲಗೆರೆ ಬಳಿ, ಅಕ್ರಮವಾಗಿ ಮರಳು ಸಾಗಾಣೆ ಮಾಡುತ್ತಿದ್ದ ಟಿಪ್ಪರ್ ಲಾರಿಯೊಂದನ್ನು ಕೂಡ ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಈ ಎರಡು ಪ್ರಕರಣ ಕುರಿತಂತೆ ಇನ್ನಷ್ಟೆ ದೂರುಗಳ ದಾಖಲಾಗಬೇಕಾಗಿದೆ ಎಂದು ತಿಳಿದುಬಂದಿದೆ. 
ಮೆಚ್ಚುಗೆ : ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಭೂ ವಿಜ್ಞಾನಿಯಾಗಿರುವ ಪ್ರಿಯಾ ಅವರು, ತಡರಾತ್ರಿ ಏಕಾಂಗಿಯಾಗಿ ಅಕ್ರಮ ಮರಳು ಅಡ್ಡೆ ಮೇಲೆ ದಾಳಿ ನಡೆಸಿ ಅಕ್ರಮ ಬಯಲಿಗೆಳೆದಿರುವ ಕ್ರಮ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯು ಸದರಿ ಮಹಿಳಾ ಅಧಿಕಾರಿಗೆ ಸೂಕ್ತ ರಕ್ಷಣೆ ನೀಡಬೇಕೆಂಬ ಆಗ್ರಹ ನಾಗರೀಕರದ್ದಾಗಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.