*ಎಂಎಸ್‍ಎಂಇ ಗೆ ವ್ಯಾಪ್ತಿ-ಅವಕಾಶಗಳಿದ್ದು ಸದುಪಯೋಗಪಡಿಸಿಕೊಳ್ಳಿರಿ : ಡಿಸಿ*

ಶಿವಮೊಗ್ಗ, ಡಿಸೆಂಬರ್ 21 :
       ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ಒಳ್ಳೆಯ ವ್ಯಾಪ್ತಿ ಹಾಗೂ ಹಣಕಾಸಿನ ಸಾಲ ಸೌಲಭ್ಯಗಳಿದ್ದು ಉದ್ದಿಮೆದಾರರು ಇದರ ಸದುಪಯೋಗ ಪಡೆಯಬೇಕೆಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ತಿಳಿಸಿದರು.
      ಸಿಡ್ಬಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಕಾಸಿಯಾ ಇವರ ಸಂಯುಕ್ತಾಶ್ರಯದಲ್ಲಿ ಇಂದು ಸುವರ್ಣ ಸಾಂಸ್ಕøತಿಕ ಭವನದಲ್ಲಿ ಇಂದು ಮತ್ತು ನಾಳೆ ಆಯೋಜಿಸಲಾಗಿರುವ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಸವಲತ್ತುಗಳು ಹಾಗೂ ಹಣಕಾಸಿನ ನೆರವು ಕುರಿತು ಅರಿವು, ರಫ್ತು ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
    ಸರ್ಕಾರ ಎಂಎಸ್‍ಎಂಇ ಕುರಿತು ಸಾಕಷ್ಟು ಔಟ್‍ರೀಚ್ ಕಾರ್ಯಕ್ರಮಗಳು ಮತ್ತು ಪ್ರೋತ್ಸಾಹ ನೀಡುತ್ತಿದ್ದರೂ ಇದರ ಬಳಕೆ ಅಷ್ಟಾಗಿ ಆಗುತ್ತಿಲ್ಲ. ಆದ್ದರಿಂದ ಶಿಕ್ಷಣದಲ್ಲಿ ಇದನ್ನು ಅಳವಡಿಸಿದರೆ ವಿದ್ಯಾರ್ಥಿ ಹಂತದಿಂದಲೇ ಹಣಕಾಸು, ಜಿಎಸ್‍ಟಿ, ತೆರಿಗೆ, ಉದ್ದಿಮೆ ಈ ಎಲ್ಲ ಬಗ್ಗೆ ವಿದ್ಯಾರ್ಥಿಗಳಿಗೆ ತಿಳುವಳಿಕೆ ಮೂಡುತ್ತದೆ. ಸರ್ಕಾರ ಸಹ ಪಠ್ಯಕ್ರಮದಲ್ಲಿ ಇದನ್ನು ಅಳವಡಿಸಲು ಚಿಂತನೆ ನಡೆಸಿದೆ.
     ನಮ್ಮದು ಕೃಷಿ ಆಧಾರಿತ ರಾಜ್ಯವಾಗಿದ್ದು ಜಿಡಿಪಿ ಯನ್ನು ಸಮತೋಲನಗೊಳಿಸಲು ಸರ್ಕಾರ ಕೌಶಲ್ಯ ಮಂತ್ರಾಲಯದ ಮೂಲಕ ಯುವಜನತೆಗೆ ಅನೇಕ ಕೌಶಲ್ಯಾಭಿವೃದ್ದಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಕೌಶಲ್ಯವನ್ನು ವೃದ್ದಿಸುವ ಕೆಲಸ ಮಾಡುತ್ತಿದೆ. 
    ಯುವಜನತೆ ಎಂಎಸ್‍ಎಂಇ ಬಗ್ಗೆ ತಿಳಿದುಕೊಂಡು, ತಮ್ಮ ಆಸಕ್ತಿದಾಯಕ ಉದ್ದಿಮೆ ತೆರೆಯಲು ಮುಂದೆ ಬರಬೇಕು. ಸಣ್ಣ ಪುಟ್ಟ ಕಾರಣಗಳಿಗೆ ನಿರುತ್ಸಾಹಿಗಳಾಗದೆ ತಮ್ಮ ಕ್ಷೇತ್ರದಲ್ಲಿ ಸಾಧನೆ ತೋರಬೇಕು. ಎಷ್ಟೋ ಜನರು ಎಂಎಸ್‍ಎಂಇ ಮೂಲಕ ಉತ್ತಮ ಸಾಧನೆಗೈದು ಹೊರ ದೇಶಗಳಿಗೆ ತಮ್ಮ ಉತ್ಪನ್ನಗಳು ರಫ್ತು ಸಹ ಮಾಡುತ್ತಿದ್ದಾರೆ ಎಂದರು.
     ಜಿಲ್ಲೆಯಲ್ಲಿ ಕೈಗಾರಿಕಾ ಪ್ರದೇಶ ವೃದ್ದಿಯಾಗಬೇಕು. ಸಣ್ಣ ಮಟ್ಟದ ಕೈಗಾರಿಕೆಗಳ ಬೆಳವಣಿಗೆಯಾಗಬೇಕು. ಕೈಗಾರಿಕಾ ವಲಯಕ್ಕೆ ಸೊರಬದಲ್ಲಿ 16 ಎಕರೆ ಜಾಗ ಗುರುತಿಸಿದ್ದು ಶೀಘ್ರದಲ್ಲಿ ಅಭಿವೃದ್ದಿ ಪಡಿಸಲಾಗುವುದು. ಕೆಐಎಡಿಬಿ, ಕೆಎಸ್‍ಎಸ್‍ಐಡಿಸಿ ವತಿಯಿಂದಲೂ ಕೈಗಾರಿಕಾ ಪ್ರದೇಶಗಳ ಅಭಿವೃದ್ದಿಯಾಗಬೇಕು ಎಂದರು.
       ಅಧ್ಯಕ್ಷತೆ ವಹಿಸಿದ್ದ ಕಾಸಿಯಾ ಅಧ್ಯಕ್ಷ ಸಿ.ಎ.ಶಶಿಧರ ಶೆಟ್ಟಿ ಮಾತನಾಡಿ, ಎಂಎಸ್‍ಎಂಇ ಗೆ ಉತ್ತಮ ಅವಕಾಶಗಳಿವೆ. ಆದರೆ ಎಂಎಸ್‍ಎಂಇ ಯೋಜನೆಗಳ ಕುರಿತು ಜನರಲ್ಲಿ ಅರಿವಿನ ಕೊರತೆ ಇದೆ. ಅರಿವು ಹೆಚ್ಚಿಸಬೇಕು. ನಮ್ಮ ರಾಜ್ಯದಲ್ಲಿ ಕೈಗಾರಿಕೆಗೆ ಹಳೆಯ ಇತಿಹಾಸವಿದೆ. ಆದರೆ ಎರಡನೇ ಪೀಳಿಗೆ ಕೈಗಾರಿಕೆಯಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಸೇವೆ, ಉದ್ಯೋಗದೆಡೆ ಹೆಚ್ಚಿನ ಒಲವು ತೋರುತ್ತಿದೆ. 
     ಕೈಗಾರಿಕಾ ನೀತಿ ಪ್ರಕಾರ ಖಾಸಗಿ ಕೈಗಾರಿಕಾ ಎಸ್ಟೇಟ್‍ಗಳನ್ನು ಅಭಿವೃದ್ದಿ ಮಾಡಬಹುದು. ಆಗ ಕನ್ವರ್ಷನ್ ಮತ್ತು ಸ್ಟ್ಯಾಂಡ್ ಡ್ಯೂಟಿ ವಿನಾಯಿತಿ ದೊರಕುತ್ತದೆ. 10 ರಿಂದ 15 ಕ್ಲಸ್ಟರ್‍ಗಳನ್ನು ಮಾಡಿದರೆ ಖರ್ಚು ಕಡಿಮೆಯಾಗುತ್ತದೆ, ಅನುಕೂಲವಾಗುತ್ತದೆ. ಇದಕ್ಕೆ ಕೈಗಾರಿಕೋದ್ಯಮಿಗಳು ಮುಂದೆ ಬರಬೇಕು ಹಾಗೂ ಯುವಜನತೆ ಸರ್ಕಾರದ ಎಂಎಸ್‍ಎಂಇ ಯೋಜನೆಗಳ ಕುರಿತು ತಿಳಿದುಕೊಳ್ಳಬೇಕೆಂದರು.
      ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಡಿಜಿಎಂ ರಾಜಮಣಿ ಮಾತನಾಡಿ, ಪಿಎಂ ಸ್ವನಿಧಿಯಿಂದ ಹಿಡಿದು ಗರಿಷ್ಟ ರೂ.250 ಕೋಟಿವರೆಗೆ ಹೂಡಿಕೆ ಮಾಡಬಹುದಾದಂತಹ ಎಂಎಸ್‍ಎಂಇ ಯೋಜನೆಗಳಿವೆ. ಅನೇಕ ಯೋಜನೆಗಳು, ಸಬ್ಸಿಡಿ, ಸಾಲ ಸೌಲಭ್ಯಗಳಿದ್ದು ಇದನ್ನು ಜನರಿಗೆ ತಿಳಿಸುವ, ತಲುಪಿಸುವ ಪ್ರಯತ್ನವಾಗುತ್ತಿದೆ. ಮಹಿಳಾ ಉದ್ಯಮಿಗಳಿಗೆ ನಾರೀಶಕ್ತಿ, ಸ್ವಂತ ಉದ್ಯಮ ಆರಂಭಿಸಲು ತರಬೇತಿಗಳು, ಕೈಗಾರಿಕೆಗೆ ಬೆಂಬಲ, ಆರೋಗ್ಯ ಸಂಜೀವಿನಿ, ಯೂನಿಯನ್ ಸೋಲಾರ್ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಬ್ಯಾಂಕ್ ನೀಡುತ್ತಿದ್ದು ಜನರು ಇದರ ಉಪಯೋಗ ಪಡೆಯಬೇಕೆಂದರು
      ಎಂಎಸ್‍ಎಂಇ ಉಪ ನಿರ್ದೇಶಕ ಎನ್ ಗೋಪಿನಾಥ ರಾವ್ ಕಾರ್ಯಕ್ರಮದ ಉದ್ದೇಶದ ಕುರಿತು ಮಾತನಾಡಿದರು.
     ಸುವರ್ಣ ಸಾಂಸ್ಕøತಿಕ ಭವನದ ಆವರಣದಲ್ಲಿ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರ ಹಲವು ಮಳಿಗೆಗಳನ್ನು ತೆರೆಯಲಾಗಿದ್ದು, ಜಿಲ್ಲಾಧಿಕಾರಿಗಳು, ಗಣ್ಯರು ವೀಕ್ಷಿಸಿದರು.
    ಎಂಎಸ್‍ಎಂಇ ಜಂಟಿ ನಿರ್ದೇಶಕ ಡಾ.ಸಾಕ್ರಟೀಸ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗಣೇಶ್ ಆರ್, ಕಾಸಿಯಾ ಉಪಾಧ್ಯಕ್ಷ ರಾಜಗೋಪಾಲ್, ಮಾಚೇನಹಳ್ಳಿ ಕೈಗಾರಿಕಾ ಸಂಘದ ಅಧ್ಯಕ್ಷ ರಮೇಶ್ ಹೆಗಡೆ, ಜೋಯಿಸ್ ರಾಮಾಚಾರ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹಕಾರ್ಯದರ್ಶಿ ವಿಜಯಕುಮಾರ್ ಇತರೆ ಉದ್ಯಮಿಗಳು ಹಾಜರಿದ್ದರು. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಎನ್ ಗೋಪಿನಾಥ್ ಸ್ವಾಗತಿಸಿದರು. ಕಾರ್ಯದರ್ಶಿ ವಸಂತ್ ಹೋಬಳಿದಾರ್ ನಿರೂಪಿಸಿದರು. 

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.