ವಾಯು ಮಾಲಿನ್ಯ ನಿಯಂತ್ರಣ ಜಾಥಾ*ಪ್ರತಿಯೊಬ್ಬರೂ ಗಿಡಗಳನ್ನು ನೆಡಬೇಕು : ಗಂಗಾಧರ್

ಶಿವಮೊಗ್ಗ, ನ.೨೯:ಶಿವಮೊಗ್ಗ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ  ಕಛೇರಿ ವತಿಯಿಂದ ಇಂದು ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಜಾಥಾವನ್ನು ಹಮ್ಮಿಕೊಳ್ಳಲಾಗಿದ್ದು,ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಜೆ.ಪಿ.ಗಂಗಾಧರ ಹಾಗೂ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ  ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಅವರು ಹಸಿರು ಭಾವುಟ ತೋರಿಸುವುದರ ಮೂಲಕ ಚಾಲನೆ ನೀಡಿದರು. 
     ಶಿವಮೊಗ್ಗ ಪ್ರಾದೇಶಿಕ ಸಾರಿಗೆ ಕಚೇರಿಯಿಂದ ಹೊರಟ ಜಾಗೃತಿ ಜಾಥಾ  ಶಿವಪ್ಪ ನಾಯಕ ವೃತ್ತದಿಂದ ಗೋಪಿ ಸರ್ಕಲ್ ಮುಖಾಂತರವಾಗಿ ಪುನಃ ಆರ್ ಟಿ ಓ ಕಛೇರಿ ತಲುಪಿತು. ವಾಯು ಮಾಲಿನ್ಯ ನಿಯಂತ್ರಣದ ಕುರಿತು ಸಾರಿಗೆ ಪ್ರಾದೇಶಿಕ ಅಧಿಕಾರಿ ಜೆ.ಪಿ.ಗಂಗಾಧರ  ಮಾತನಾಡಿ, ಪ್ರಸ್ತುತ ವಾಯು ಮಾಲಿನ್ಯ ನಿಯತ್ರಣದ ಕುರಿತು ಪ್ರತಿಯೊಬ್ಬರು ಅರಿವು ಪಡೆದುಕೊಳ್ಳುವುದರ ಜೊತೆಗೆ ಗಿಡ ಮರಗಳನ್ನು ಬೆಳೆಸಬೇಕು. ವಾಯು ಮಾಲಿನ್ಯ ನಿಯಂತ್ರಣಕ್ಕೆ ವಿದ್ಯುತ್ ಚಾಲಿತ ವಾಹನಗಳನ್ನು ಬಳಸಬೇಕು.ಜೊತೆಗೆ, ಅವಶ್ಯಕತೆ ಇಲ್ಲದಿದ್ದರೆ ಸಾರ್ವಜನಿಕ ವಾಹನಗಳನ್ನು ಬಳಸಿ ಸ್ವಂತ ವಾಹನಗಳ ಬಳಕೆ ಕಡಿಮೆ ಮಾಡಬೇಕು ಎಂದು ವಿನಂತಿಸಿದರು.
    ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ. ಶಿವಣ್ಣ ಅವರು ಮಾತನಾಡಿ ವಾಯು ಮಾಲಿನ್ಯ ನಿಯತ್ರಣ ನಮ್ಮೆಲ್ಲರ ಹೊಣೆಯಗಿದೆ. ಇದಕ್ಕಾಗಿ ನಾವೆಲ್ಲರೂ ಹೆಚ್ಚಾಗಿ ಮರಗಿಡಗಳನ್ನು ಬೆಳೆಸಿ ಪರಿಸರ ರಕ್ಷಣೆ ಮಾಡಬೇಕಾಗಿದೆ. ಸುಸ್ಥಿತಿಯಲ್ಲಿರುವ ವಾಹನಗಳ ಬಳಕೆಯಿಂದ  ಮಾಲಿನ್ಯ ನಿಯಂತ್ರಣ ಸಾಧ್ಯ ಎಂದರು.
ಜಾಥಾ ಕಾರ್ಯಕ್ರಮದಲ್ಲಿ ಹಿರಿಯ ಮೋಟಾರು ವಾಹನ ನಿರೀಕ್ಷಕರಾದ ಮಲ್ಲೇಶಪ್ಪ, ಆರ್.ಟಿ.ಓ. ಅಧೀಕ್ಷಕರಾದ ರಾಮಚಂದ್ರಪ್ಪ ಹೆಚ್.ಸಿ., ಪ್ರಹ್ಲಾದ್, ಪ್ರ.ದ.ಸ ಮೋಹನ್ ಕುಮಾರ್ ಶಿವಮೊಗ್ಗ ಸರ್ಕಾರಿ ಪದವಿ ಪೂರ್ವ ಕಾಲೇಜು  ಹಾಗೂ ಸರ್ವೋದಯ ಕಾಲೇಜಿನ ವಿಧ್ಯಾರ್ಥಿಗಳು, ಶಿವಮೊಗ್ಗ ಜಿಲ್ಲೆಯ ಆಟೋ ಚಾಲಕರು ಹಾಗೂ ಆರ್. ಟಿ.ಓ. ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.