ಆಗಸ್ಟ್ 12 ರಿಂದ 14ರವರೆಗೆ ಗಾಯತ್ರೀ ಪ್ರತಿಪತ್ ಮಹೋತ್ಸವ

ಶಿವಮೊಗ್ಗ: ತಾಲೂಕು ಬ್ರಾಹ್ಮಣ ಸೇವಾ ಸಂಘದ ವತಿಯಿಂದ ನಗರ ಮತ್ತು ಗ್ರಾಮಾಂತರದ ವಿವಿಧ ವಿಪ್ರ ಸಂಘಟನೆಗಳ ಸಹಯೋಗದಲ್ಲಿ ಆಗಸ್ಟ್ 12 ರಿಂದ 14ರವರೆಗೆ ಗಾಯತ್ರೀ ಪ್ರತಿಪತ್ ಮಹೋತ್ಸವ ಆಯೋಜಿಸಲಾಗಿದೆ ಎಂದು ತಾಲೂಕು ಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಕೆ.ವೆಂಕಟೇಶ ರಾವ್ ತಿಳಿಸಿದರು.
ಅವರು ಇಂದು ಪ್ರೆಸ್ ಟ್ರಸ್ಟ್ ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಗಾಯತ್ರೀ ಪ್ರತಿಪತ್ ಅಂಗವಾಗಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆಗಸ್ಟ್ 12ರ ಬೆಳಿಗ್ಗೆ 9 ಗಂಟೆಯಿಂದ ರವಿಶಂಕರ್ ಸೋಮಯಾಜಿ ಅವರ ಆಚಾರ್ಯತ್ವದಲ್ಲಿ ಕೋಟೆ ರಸ್ತೆಯ ಗಾಯತ್ರಿ ದೇವಸ್ಥಾನದಲ್ಲಿ ಗಾಯತ್ರಿ ಹೋಮ ನಡೆಯಲಿದೆ. ಮಧ್ಯಾಹ್ನ 12.30 ಕ್ಕೆ ಪೂರ್ಣಾಹುತಿ ನೆರವೇರಲಿದೆ ಎಂದರು.
ಆಗಸ್ಟ್ 13ರ ಸಂಜೆ 06.30 ರಿಂದ ನಗರದ ಯಕ್ಷಕೂಟ ಇವರು ಯಕ್ಷಗಾನ ತಾಳಮದ್ದಲೆ ನಡೆಸಿಕೊಡಲಿದ್ದಾರೆ. ಕರ್ಣಭೇದನ ಪ್ರಸಂಗವನ್ನು ಪ್ರಸ್ತುತ ಪಡಿಸಲಿದ್ದಾರೆ ಎಂದು ತಿಳಿಸಿದರು.
ಆಗಸ್ಟ್ 14ರ ಬೆಳಿಗ್ಗೆ 09 ರಿಂದ ಗಾಯತ್ರಿ ಮಾತೆಯ ರಾಜಬೀದಿ ಉತ್ಸವ ನಡೆಯಲಿದೆ. ರಾಜಬೀದಿ ಉತ್ಸವದಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಕೂಪನ್ ನೀಡಲಾಗುವುದು. ಈ ಕೂಪನ್ ಗಳ ಆಧಾರದಲ್ಲಿ ಲಾಟರಿ ಮೂಲಕ 5 ಜನ ಪುರುಷರು ಹಾಗೂ 5 ಜನ ಮಹಿಳೆಯರನ್ನು ಆಯ್ಕೆ ಮಾಡಿ ಅವರಿಗೆ ಬೆಳ್ಳಿ ನಾಣ್ಯವನ್ನು ಬಹುಮಾನ ನೀಡಲಾಗುವುದು ಎಂದರು. 
ಮಂಗಳ ವಾದ್ಯ ಮತ್ತು ಚಂಡೆ ವಾದ್ಯದೊಂದಿಗೆ ಗಾಯತ್ರೀ ದೇವಸ್ಥಾನದಿಂದ ಉತ್ಸವ ಆರಂಭವಾಗಲಿದೆ. ಮತ್ತೂರು ಜಾನಕಿರಾಮ ಆಶ್ರಮದ ಶ್ರೀ ಬೋಧಾನದೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಸಾಧಕರಿಗೆ ಸನ್ಮಾನ ಹಾಗೂ ಭಜನಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದರು. 
ಶಾಸಕ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಸಿ.ನಟರಾಜ ಭಾಗವತ್, ಲೇಖಕಿ ಡಾ.ಮಂಜುಳಾ ಎನ್.ಆರ್, ಸವಿತಾ ಮಾಧವ ಹಾಗೂ ಕೆ.ಎಸ್.ಅನಂತ ರಾಮಯ್ಯ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು. 
ಇದೇ ವೇಳೆ ಧಾರ್ಮಿಕ ಚಿಂತಕ ರವಿಶಂಕರ್ ಸೋಮಯಾಜಿ, ಬ್ರಾಹ್ಮಣ ಅಡುಗೆಯವರ ಸಂಘದ ಅಧ್ಯಕ್ಷ ಜಿ.ಕೆ.ಮಾಧವಮೂರ್ತಿ, ಮೆಗ್ಗಾನ್ ಆಸ್ಪತ್ರೆ ಅಧೀಕ್ಷಕ ಡಾ.ಶ್ರೀಧರ್ ಎಸ್, ಸಮಾಜ ಸೇವಕ ರಾಮಚಂದ್ರ ಮೈಪಾಡಿ, ಸಿಟಿ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕ ಉಮಾಶಂಕರ ಉಪಾಧ್ಯ, ಕಾಮಾಕ್ಷಮ್ಮ ಅವರನ್ನು ಸನ್ಮಾನಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ನಟರಾಜ ಭಾಗವತ್, ರವಿಶಂಕರ್, ಲಕ್ಷ್ಮಿ ಶ್ರೀಧರ್, ಶ್ರೀಧರ ಮೂರ್ತಿ, ಸೋಮಶೇಖರ್, ಪ್ರದೀಪ್, ಮೈಲಾರಿ ರಾವ್, ಸಂತೋಷ್ ಕುಮಾರ್, ಕೇಶವಮೂರ್ತಿ, ಜಿ.ಕೆ. ಮಾಧವಮೂರ್ತಿ, ಮುರಳೀಧರ್ ಇದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.