ಶಿವಮೊಗ್ಗ: ವಾಲ್ಮೀಕಿ ಸಮಾಜಕ್ಕೆ ಶೇ . 7.5 ರಷ್ಟು ಮೀಸಲಾತಿ ಕೊಡುವಲ್ಲಿ ವಿಳಂಬ ನೀತಿ ಖಂಡಿಸಿ, ಮೇ 20ರಂದು ಬೃಹತ್ ಪ್ರತಿಭಟನೆ

ಶಿವಮೊಗ್ಗ: ವಾಲ್ಮೀಕಿ ಸಮಾಜಕ್ಕೆ ಶೇ . 7.5 ರಷ್ಟು ಮೀಸಲಾತಿ ಕೊಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಸರ್ಕಾರದ ದಿವ್ಯ ನಿರ್ಲಕ್ಷ್ಯ ಖಂಡಿಸಿ ರಾಜ್ಯಾದ್ಯಂತ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಕರ್ನಾಟಕ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ಶಿವಮೊಗ್ಗ ವತಿಯಿಂದ ಮೇ 20ರಂದು  ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಮುಖ್ಯಸ್ಥ ಎಂ.ಎಸ್. ಬಸವರಾಜಪ್ಪ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೀಸಲಾತಿಗಾಗಿ ಆಗ್ರಹಿಸಿ ಕಳೆದ 95 ದಿನಗಳಿಂದ ವಾಲ್ಮೀಕಿ ರಾಜನಹಳ್ಳಿ ಗುರು ಪೀಠದ ಪರಮ ಪೂಜ್ಯ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಗಳು ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಅಹೋ ರಾತ್ರಿ ಧರಣಿ ನಡೆಸುತ್ತಿದ್ದರೂ ಸಹ ಸರ್ಕಾರ ತಿರುಗಿಯೂ ನೋಡದೇ ತಾತ್ಸಾರ ಮಾಡುತ್ತಿದೆ. ಶ್ರೀಗಳನ್ನು ಬೀದಿಯಲ್ಲಿ ಕೂರುವಂತೆ ಮಾಡಿರುವುದು ಖಂಡನೀಯ ಮತ್ತು ನಾಚಿಕೆಯ ವಿಷಯವಾಗಿದೆ. ಇದರ ವಿರುದ್ಧ ರಾಜ್ಯಾದ್ಯಂತ ಹಲವು ಬಾರಿ ಹೋರಾಟ ಮಾಡಿದರೂ ಕೂಡ ಫಲ ಸಿಕ್ಕಿಲ್ಲ ಆದ್ದರಿಂದ ನಮ್ಮ ಹೋರಾಟವನ್ನು ತೀವ್ರಗೊಳಿಸುತ್ತಿದ್ದೇವೆ  ಎಂದರು.
 ಮೇ 20 ರಂದು ಬೆಳಿಗ್ಗೆ 10 ಗಂಟೆಗೆ ಶಿವಮೊಗ್ಗದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು ಅಂದು ಸೈನ್ಸ್ ಮೈದಾನದಿಂದ ಜಿಲ್ಲಾಧಿಕಾರಿಗಳ ಕಛೇರಿಯವರೆಗೆ ಮೆರವಣಿಗೆ ಮೂಲಕ ಸಾಗಿ ಜಿಲ್ಲಾಧಿಕಾರಿಗಳ ಕಛೇರಿ ಬಳಿ ಪ್ರತಿಭಟನಾ ಸಭೆ ನಡೆಸಿ ನಂತರ ಮನವಿ ಸಲ್ಲಿಸಲಾಗುವುದು . ಈ ಪ್ರತಿಭಟನೆಯಲ್ಲಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ಎಲ್ಲಾ ಮುಖಂಡರುಗಳು ಭಾಗವಹಿಸುವರು ಎಂದರು.
ಸಂಚಾಲಕ ಹೆಚ್.ಆರ್. ಹನುಮಂತಪ್ಪ ಮಾತನಾಡಿ, ವಾಲ್ಮೀಕಿ ಸಮಾಜ ಎಲ್ಲಾ ರಂಗಗಳಲ್ಲಿಯೂ ಹಿಂದೆ ಉಳಿದಿದೆ. ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದರೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ .7.5 ರಷ್ಟು ಮೀಸಲಾತಿ ಬೇಕೇ ಬೇಕು . ರಾಜನಹಳ್ಳಿಯಿಂದ ರಾಜ್ಯಧಾನಿಗೆ ಪಾದಯಾತ್ರೆ ಬಂದಾಗ ಅಂದಿನ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿಯವರು ಮೀಸಲಾತಿ ಆದೇಶ ಹೊರಡಿಸುವುದಾಗಿ ಭರವಸೆ ನೀಡಿದ್ದರು. ನಂತರ 3 ನೇ ವರ್ಷದ ವಾಲ್ಮೀಕಿ ಜಾತ್ರೆ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಸಹ ಮೀಸಲಾತಿ ನೀಡುವುದಾಗಿ ಭರವಸೆ ನೀಡಿದ್ದರು. ಈ ಭರವಸೆಗಳು ಈಗ ಹುಸಿಯಾಗಿವೆ  ಎಂದು ಆರೋಪಿಸಿದರು.
ಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗ ರಚಿಸಲಾಗಿತ್ತು. ಆಯೋಗದ ವರದಿ ಬಂದಿದ್ದರೂ ಕೂಡ ಜಾರಿಗೆ ಸರ್ಕಾರ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಇದು ವಾಲ್ಮೀಕಿ ಸಮಾಜಕ್ಕೆ ಮಾಡಿದ ಬಹು ದೊಡ್ಡ ಅನ್ಯಾಯವಾಗಿದೆ . ಇದನ್ನು ಖಂಡಿಸಿ ವರದಿ ಜಾರಿಗೆ ಆಗ್ರಹಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಭದ್ರಾವತಿಯಲ್ಲೂ ಕೂಡ ಮೇ 20ರಂದು ಬೆಳಿಗ್ಗೆ 10 ಗಂಟೆಗೆ ಅಂಡರ್ ಬ್ರಿಡ್ಜ್‍ನಿಂದ ತಾಲ್ಲೂಕು ಕಚೇರಿಯವರೆಗೆ ಮೆರವಣಿಗೆಯಲ್ಲಿ ಸಾಗಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಯವರಿಗೆ ಮತ್ತು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಆರ್. ಲಕ್ಷ್ಮಣ, ರಂಗನಾಥ್, ಟಿ. ಲಕ್ಷ್ಮಣಪ್ಪ, ಬಸವರಾಜ್, ಸುರೇಶ್, ಶೇಖರಪ್ಪ, ಮೋಹನ್, ಮೇಘರಾಜ್ ಮುಂತಾದವರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.