ಮರಳು ಸಾಗಾಣಿಕೆದಾರರಿಂದ ನಯಾಪೈಸೆ ತೆಗೆದುಕೊಂಡಿಲ್ಲಧರ್ಮಸ್ಥಳದ ಮಂಜುನಾಥೇಶ್ವರ ಸನ್ನಿಧಾನದಲ್ಲಿ ಪ್ರಮಾಣ ಮಾಡಲು ಸಿದ್ದ:ಶಾಸಕ ಎಚ್.ಹಾಲಪ್ಪ
ಸಾಗರ : ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡುವಂತೆ ನೀಡಿರುವ ಆಹ್ವಾನವನ್ನು ನಾನು ಸ್ವೀಕರಿಸಿದ್ದು, ಫೆ. ೧೩ರಂದು ನಾನು ಧರ್ಮಸ್ಥಳದ ಮಂಜುನಾಥೇಶ್ವರ ಸನ್ನಿಧಾನದಲ್ಲಿ ನಾನು ಮರಳು ಸಾಗಾಣಿಕೆದಾರರಿಂದ ನಯಾಪೈಸೆ ತೆಗೆದುಕೊಂಡಿಲ್ಲ ಎಂದು ಪ್ರಮಾಣ ಮಾಡಲು ಸಿದ್ದನಿದ್ದೇನೆ ಎಂದು ಶಾಸಕ ಎಚ್.ಹಾಲಪ್ಪ ಹರತಾಳು ತಿಳಿಸಿದ್ದಾರೆ.
ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈಚೆಗೆ ಮಾಜಿ ಶಾಸಕರು ನಾನು ಮರಳು ಸಾಗಾಣಿಕೆದಾರರಿಂದ ಹಣ ಪಡೆದಿದ್ದೇನೆ ಎಂದು ಆರೋಪಿಸಿದ್ದರು. ಜೊತೆಗೆ ನಾನು ಹಣ ತೆಗೆದುಕೊಂಡಿಲ್ಲ ಎಂದರೆ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಸವಾಲು ಎಸೆದಿದ್ದಾರೆ. ಅವರ ಸವಾಲನ್ನು ನಾನು ಸ್ವೀಕರಿಸಿದ್ದೇನೆ. ಇದಕ್ಕಾಗಿ ಫೆ. ೧೩ಕ್ಕೆ ದಿನಾಂಕ ನಿಗಧಿ ಮಾಡಿದ್ದೇನೆ. ನನ್ನ ವಿರುದ್ದ ಸುಳ್ಳು ಆರೋಪ ಮಾಡಿರುವ ಮಾಜಿ ಶಾಸಕರು ಧರ್ಮಸ್ಥಳಕ್ಕೆ ಬರಬೇಕು ಎಂದು ಹೇಳಿದರು.
ನಾನು ಮತ್ತು ನನ್ನ ಕುಟುಂಬಸ್ತರು ಮರಳು ಸಾಗಾಣಿಕೆದಾರರಿಂದ ಒಂದು ಪೈಸೆ ಕಮೀಷನ್ ಪಡೆದಿಲ್ಲ. ಮರಳು ಸಾಗಾಣಿಕೆದಾರರಿಂದ, ಪೊಲೀಸರಿಂದ ಹಣ ಪಡೆಯುವಷ್ಟು ಸಣ್ಣ ರಾಜಕಾರಣಿ ನಾನಲ್ಲ. ಆದರೆ ಅವರು ಶಾಸಕರಾಗಿದ್ದ ಸಂದರ್ಭದಲ್ಲಿ ಗಣಪತಿ ಗುಡಾಜಿ ಎನ್ನುವ ಪೊಲೀಸ್ ಇನ್ಸ್ಪೆಕ್ಟರ್ ಮುಂದಿರಿಸಿಕೊAಡು ಕಮೀಷನ್ ಪಡೆದು ಅಭ್ಯಾಸವಾಗಿ ಹೋಗಿದೆ. ಇದೀಗ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ನಾನು ಹಣ ಪಡೆದಿಲ್ಲ ಎಂದು ಪ್ರಮಾಣ ಮಾಡುವ ಜೊತೆಗೆ ಮಾಜಿ ಶಾಸಕರು ತಾವು ಸಹ ತಮ್ಮ ಅವಧಿಯಲ್ಲಿ ಮರಳು ಸಾಗಾಣಿಕೆದಾರರಿಂದ ಕಮೀಷನ್ ಪಡೆದಿಲ್ಲ ಎಂದು ಪ್ರಮಾಣ ಮಾಡಬೇಕು. ನನಗೆ ಯಾರಾದರೂ ಮರಳು ಸಾಗಾಣಿಕೆದಾರರು ಕಮೀಷನ್ ಕೊಟ್ಟಿದ್ದರೆ ಅವರು ಸಹ ಬಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು.
ಕೆಲವು ದಿನಗಳ ಹಿಂದೆ ಲಿಂಗನಮಕ್ಕಿ ಜಲಾಶಯದಿಂದ ಹೆಚ್ಚಿನ ನೀರು ಬಿಟ್ಟು ನಾನು ಕಮೀಷನ್ ಪಡೆಯುತ್ತಿದ್ದೇನೆ ಎಂದು ಮಾಜಿ ಶಾಸಕರು ಆರೋಪ ಮಾಡಿದ್ದರು. ಇದೀಗ ಮರಳು ಸಾಗಾಣಿಕೆದಾರರಿಂದ ಕಮೀಷನ್ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ. ಒಂದರ್ಥದಲ್ಲಿ ಮಾಜಿ ಶಾಸಕರದ್ದು ಹಿಟ್ ಎಂಡ್ ರನ್ ಸಂಸ್ಕೃತಿ. ನೀರು ಹೆಚ್ಚು ಬಿಟ್ಟರೆ ನನಗೆ ಹೇಗೆ ಕಮೀಷನ್ ಬರುತ್ತದೆ. ಮಾಜಿ ಶಾಸಕರು ಯಾವುದೇ ಮಾಹಿತಿ ಇರಿಸಿಕೊಳ್ಳದೆ ವೃಥಾ ಆರೋಪ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮಾಜಿ ಶಾಸಕರ ಇಂತಹ ಆರೋಪಗಳಿಗೆ ಉತ್ತರ ನೀಡದೆ ನಿರ್ಲಕ್ಷö್ಯ ಮಾಡುತ್ತೇನೆ ಎಂದು ಹೇಳಿದರು.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಇರುವಕ್ಕಿ ರೈತ ಪರ ಹೋರಾಟ ಸಂದರ್ಭದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಪೊಲೀಸ್ ಬಂದೋಬಸ್ತಿನಲ್ಲಿ ಮೂರು ಬಡ ಬ್ರಾಹ್ಮಣ ಕುಟುಂಬವನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಸಿದ್ದರು. ಕಂದಾಯ ಇಲಾಖೆ ಅಧಿಕಾರಿಗಳು ದೀವರು, ಲಿಂಗಾಯಿತರು ಅಲ್ಲಿದ್ದರೆ ಒಕ್ಕಲೆಬ್ಬಿಸುತ್ತಿರಲಿಲ್ಲ. ಈ ಸಂದರ್ಭದಲ್ಲಿ ಲೋಕಾಭಿರಾಮವಾಗಿ ಕಾಗೋಡು ತಿಮ್ಮಪ್ಪ ಅವರಿಗೆ ವಯಸ್ಸಾಗಿದೆ, ಏನು ಗೊತ್ತಾಗುವುದಿಲ್ಲ ಬಿಡಿ ಎಂದು ಹೇಳಿದ್ದೇನೆ. ಕೆಲವರು ಅದನ್ನು ಬೇರೆ ರೀತಿ ತಿರುಚಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.
ರಾಷ್ಟಿçÃಯ ಹೆದ್ದಾರಿ ಅಗಲೀಕರಣ ಸಂದರ್ಭದಲ್ಲಿ ನಾನು ಮರ ಕಡಿತಲೆ ಮಾಡುತ್ತಿರುವುದು ಸಿಗಂದೂರು ಆಣೆಯಾಗೂ ನನಗೆ ಬೇಸರ ತರುತ್ತಿದೆ ಎಂದು ಹೇಳಿದ್ದೇನೆಯೆ ವಿನಃ, ಸಿಗಂದೂರು ಆಣೆಗೂ ಮರ ಕಡಿತಲೆ ಮಾಡಿಸುವುದಿಲ್ಲ ಎಂದು ಎಲ್ಲೂ ಹೇಳಿಲ್ಲ. ಅಭಿವೃದ್ದಿ ಆಗಬೇಕು ಎನ್ನುವ ಹಿನ್ನೆಲೆಯಲ್ಲಿ ಮರ ಕಡಿತಲೆ ಆದಷ್ಟು ಕಡಿಮೆ ಮಾಡಲು ಎಲ್ಲ ಪ್ರಯತ್ನ ನಡೆಸಲಾಗುತ್ತಿದೆ ಎಂದು ಹೇಳಿದರು.
ಗೋಷ್ಟಿಯಲ್ಲಿ ಬಿಜೆಪಿ ಗ್ರಾಮಾಂತರ ಘಟಕದ ಅಧ್ಯಕ್ಷ ಲೋಕನಾಥ್ ಬಿಳಿಸಿರಿ, ನಗರ ಅಧ್ಯಕ್ಷ ಗಣೇಶಪ್ರಸಾದ್, ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್, ಎಪಿಎಂಸಿ ಅಧ್ಯಕ್ಷ ಚೇತನರಾಜ್ ಕಣ್ಣೂರು, ಪ್ರಮುಖರಾದ ಸಂತೋಷ್ ಶೇಟ್, ಸತೀಶ್ ಕೆ., ರವೀಂದ್ರ ಬಿ.ಟಿ. ಇನ್ನಿತರರು ಹಾಜರಿದ್ದರು.

Leave a Comment