ಕೊರೊನಾಗೆ ಆಯುರ್ವೇದ ಚಿಕಿತ್ಸೆ: ಅನಧಿಕೃತ ಮಾಹಿತಿ ಪ್ರಕಟಿಸಿದ ಗಿರಿಧರ್‌ ಕಜೆಗೆ ನೋಟಿಸ್‌


ಎರಡು ಆಯುರ್ವೇದ ಮಾತ್ರೆಗಳ ಪ್ರಯೋಗ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಮತ್ತು ಬಿಎಂಸಿಆರ್‌ಐನ ನೈತಿಕ ಸಮಿತಿಗೆ ಯಾವುದೇ ಫಲಿತಾಂಶಗಳನ್ನು ಸಲ್ಲಿಸಿಲ್ಲ ಎಂದು ಸಮಿತಿಯು ಸ್ಪಷ್ಟನೆ ನೀಡಿದೆ.
 
ಬೆಂಗಳೂರು: ಆಯುರ್ವೇದದಿಂದ ಕೋವಿಡ್‌ ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಬಹಿರಂಗವಾಗಿ ಘೋಷಿಸಿಕೊಂಡಿದ್ದ ಆಯುರ್ವೇದ ವೈದ್ಯ ಡಾ. ಗಿರಿಧರ್‌ ಕಜೆ ಈಗ ಇಕ್ಕಟ್ಟಿಗೆ ಸಿಲುಕಿದ್ದಾರೆ. ಕೊರೊನಾ ರೋಗಿಗಳ‌ ಚಿಕಿತ್ಸೆ ಸಂಬಂಧ 'ಅನಧಿಕೃತ ಮಾಹಿತಿಯನ್ನು ಪ್ರಕಟಿಸಿದ್ದೀರಿ' ಎಂದು ಆಕ್ಷೇಪ ಎತ್ತಿರುವ 'ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ(ಬಿಎಂಸಿಆರ್‌ಐ)ಯ ನೈತಿಕ ಸಮಿತಿ' ಈ ಬಗ್ಗೆ ಸಾರ್ವಜನಿಕವಾಗಿ ವಾಸ್ತವ ಸಂಗತಿಗಳನ್ನು ತೆರೆದಿಡುವಂತೆ ಸೂಚಿಸಿ ನೋಟಿಸ್‌ ಜಾರಿ ಮಾಡಿದೆ.
ನೋಟಿಸ್‌ನ ಪೂರ್ಣಪಾಠ ಇಲ್ಲಿದೆ,
ಕೋವಿಡ್‌-19 ಪಾಸಿಟಿವ್‌ ರೋಗಿಗಳಿಗೆ ನಿರ್ದಿಷ್ಟ ಆರೈಕೆಯ ಜೊತೆಗೆ ಆಡ್‌ ಆನ್‌ ಥೆರಪಿ (ಹೆಚ್ಚುವರಿ)ಯಾಗಿ ನಿಮ್ಮ ಭೌಮ್ಯ (Bhoumya) ಮತ್ತು ಸಾಥ್ಮಿಯಾ (Saathmya) ಎಂಬ ಎರಡು ಮಾತ್ರೆಗಳ ದಕ್ಷತೆ ಮತ್ತು ಸುರಕ್ಷತೆಯನ್ನು ಮೌಲ್ಯಮಾಪನ ನಡೆಸಲು ಕ್ಲಿನಿಕಲ್‌ ಟ್ರಯಲ್‌ಗಾಗಿ ನೀವು ಬಿಎಂಸಿಆರ್‌ಐನ್ನು ಸಂಪರ್ಕಿಸಿದ್ರಿ.
ಇದರ ಪ್ರಯೋಗ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಮತ್ತು ಬಿಎಂಸಿಆರ್‌ಐನ ನೈತಿಕ ಸಮಿತಿಗೆ ಯಾವುದೇ ಫಲಿತಾಂಶಗಳನ್ನು ಸಲ್ಲಿಸಿಲ್ಲ ಎಂಬುದು ನಿಮಗೆ ತಿಳಿದಿದೆ. ಇಂಥಹ ವಾಸ್ತವ ಸ್ಥಿತಿಯಲ್ಲಿ ನೀವು, ಪ್ರಯೋಗವು ಯಶಸ್ವಿಯಾಗಿದೆ ಎಂದು ಸಾರ್ವಜನಿಕವಾಗಿ ಹೇಳಿಕೊಂಡಿದ್ದೀರಿ. ಇದನ್ನು ಒಪ್ಪಲು ಸಾಧ್ಯವೇ ಇಲ್ಲ, ಮತ್ತು ಒಬ್ಬರ ಜವಾಬ್ದಾರಿಯನ್ನು ಮೀರಿದ ನಡವಳಿಕೆಯಾಗಿದೆ. ಇಂಥಹ ಸೂಕ್ಷ್ಮ ಮಾಹಿತಿಯನ್ನು ಬಹಿರಂಗಪಡಿಸುವಾಗ, ಸೂಕ್ತ ಪ್ರಾಧಿಕಾರಗಳಿಂದ ಅನುಮತಿ ಪಡೆದಿರಬೇಕು ಎಂಬುದು ನಿಮಗೆ ತಿಳಿದಿದೆ.
ಪ್ರಸ್ತುತ ಸಂದರ್ಭದಲ್ಲಿ ಮಾಹಿತಿಯು ಬಹಳ ಸೂಕ್ಷ್ಮವಾಗಿರುವುದರಿಂದ ನಿಮ್ಮ ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ವಾಸ್ತವ ಪರಿಸ್ಥಿತಿಯ ಬಗ್ಗೆ ನೀವು ತಕ್ಷಣವೇ ಮಾಧ್ಯಮಗಳನ್ನು ಕರೆದು ಸ್ಪಷ್ಟನೆ ನೀಡಲು ಕೋರಲಾಗಿದೆ. ತಪ್ಪಿದಲ್ಲಿ, ಸಾರ್ವಜನಿಕರನ್ನು ದಾರಿ ತಪ್ಪಿಸುವ ನಿಮ್ಮ ನಡವಳಿಕೆಗಾಗಿ ನಾವು ಈ ಪ್ರಯೋಗವನ್ನು ತಕ್ಷಣವೇ ಸ್ಥಗಿತಗೊಳಿಸಬೇಕಾಗುತ್ತದೆ. - ಎಂದು ಬಿಎಂಸಿಆರ್‌ಐ ನೈತಿಕ ಸಮಿಯ ಅಧ್ಯಕ್ಷರು ಸ್ಪಷ್ಟ ಮಾತುಗಳಲ್ಲಿ ಡಾ. ಗಿರಿಧರ್‌ ಕಜೆಯವರಿಗೆ ಎಚ್ಚರಿಕೆ ನೀಡಿದ್ದಾರೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.