ಪತ್ರಿಕಾ ರಂಗ ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ ಎಂಬ ಭ್ರಮೆಯನ್ನು ಬಿಡಬೇಕು : ಆಯನೂರು ಮಂಜುನಾಥ್

ಶಿವಮೊಗ್ಗ: ಪತ್ರಕರ್ತರು ಸಮಾಜದ ನೋವುಗಳನ್ನು ಅರಿತು ಅದರ ಪರಿಹಾರಕ್ಕೆ ಪ್ರಯತ್ನ ಪಡುತ್ತಾರೆ. ಆದರೆ ಅವರ ನೋವುಗಳನ್ನು ಪತ್ರಿಕೆಗಳಲ್ಲಿ ಬರೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಪತ್ರಿಕಾ ರಂಗ ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ ಎಂಬ ಭ್ರಮೆಯನ್ನು ಬಿಡಬೇಕು ಎಂದು ಮಾಜಿ ಸಂಸದ, ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದರು.
ಅವರು ಭಾನುವಾರ ಇಲ್ಲಿನ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ.), ಶಿವಮೊಗ್ಗ ಜಿಲ್ಲಾ ಘಟಕದ ೨ನೇ ವಾರ್ಷಿಕೋತ್ಸವ ಸಮಾರಂಭದ ಅಂಗವಾಗಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ, ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಉತ್ತೀರ್ಣರಾದ ಸರ್ಕಾರಿ ಶಾಲೆಗಳ ಹಾಗೂ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಸನ್ಮಾನ, ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ, ಅಗಲಿದ ಪತ್ರಕರ್ತರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಪತ್ರಿಕಾ ರಂಗ ಉದ್ಯಮವಾಗಿ ಬೆಳೆಯುತ್ತಿದೆ. ಆದರೆ, ಪತ್ರಕರ್ತರ ಅಭ್ಯುದಯ ಆಗುತ್ತಿಲ್ಲ. ಪತ್ರಕರ್ತರನ್ನು ಕಂಡರೆ ರಾಜಕಾರಣಿಗಳು ಭಯ ಪಡುವುದು, ಇವರ ವಿಚಾರ ನಮಗ್ಯಾಕೆ ಎಂದು ಸುಮ್ಮನಿರುತ್ತಾರೆ. ಅದನ್ನೇ ಪತ್ರಕರ್ತರು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ಪತ್ರಿಕೆಗಳನ್ನು ನಡೆಸುವುದು ಕಷ್ಟಕರ. ಸಮಾಜದಲ್ಲಿ ದೊಡ್ಡ ಮನುಷ್ಯರಂತೆ ಕಾಣುವ ಪತ್ರಕರ್ತರ ಸಮಸ್ಯೆಗಳು ಯಾರ ಕಣ್ಣಿಗೂ ಕಾಣುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ನಾನೂ ಸಹ ಪತ್ರಿಕೆಯ ಸಂಪಾದಕನಾಗಿ, ಮಾಲೀಕನಾಗಿ ಕೆಲಸ ಮಾಡಿದ್ದೆ. ಅಜೇಯ ಪತ್ರಿಕೆಯನ್ನು ೨ ವರ್ಷಗಳ ಕಾಲ ನಡೆಸಿದ್ದೆ. ಆಗ ನನಗೆ ಅನಿಸಿದ್ದು, ಪತ್ರಿಕೆಯನ್ನು ನಡೆಸುವುದು ಸುಲಭವಲ್ಲ, ಅಂತಾ ಕೈ ಬಿಟ್ಟು ಸುಮ್ಮನಾದೆ ಎಂದು ಮಾರ್ಮಿಕವಾಗಿ ನುಡಿದರು. 
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಪತ್ರಿಕೆಗಳನ್ನು ನಡೆಸುವುದು ದುಸ್ಸಾಹಸದ ಕೆಲಸ. ಪತ್ರಕರ್ತರ ಅನುಕೂಲಕ್ಕೆಂದು ಈ ಹಿಂದೆ ನಗರಸಭೆ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ವಿಶೇಷ ನಿಧಿ ಸ್ಥಾಪನೆ ಮಾಡಿದ್ದೆವು. ಅದರ ಸದ್ಬಳಕೆ ಆಗುತ್ತಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರದಿಂದ ಅಗತ್ಯ ಸೌಕರ್ಯಗಳಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಇಂದಿನ ಕಾರ್ಯಕ್ರಮದಲ್ಲಿ ಎಲ್ಲ ಪತ್ರಿಕಾ ಸಂಘಟನೆಗಳವರನ್ನು ಆಹ್ವಾನಿಸಿ ಕಾರ್ಯಕ್ರಮ ಮಾಡಲಾಗುತ್ತಿದೆ. ಹಾಗೆಯೇ ಸರ್ಕಾರಿ ಶಾಲೆಯ ಪ್ರತಿಭಾನ್ವಿತ ಮಕ್ಕಳನ್ನು ಪುರಸ್ಕರಿಸಿ ಸನ್ಮಾನಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಾನೂ ಸಹ ದಿನಪತ್ರಿಕೆಯನ್ನು ಹಂಚುತ್ತಿದ್ದೆ ಎಂದರು.   
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಪತ್ರಕರ್ತರು ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಮಾಧ್ಯಮ ಸಲಹೆಗಾರರಾದ ಜಗಳೂರು ಲಕ್ಷö್ಮಣರಾವ್‌ರವರು ಮಾತನಾಡಿ, ಪತ್ರಿಕಾ ದಿನಾಚರಣೆಯ ಮಹತ್ವ, ಕರ್ನಾಟಕದಲ್ಲಿ ಪತ್ರಿಕಾರಂಗ ಬೆಳೆದು ಬಂದ ದಾರಿಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್ ಮಾತನಾಡಿ, ಪತ್ರಕರ್ತರಲ್ಲಿ ತಾರತಮ್ಯ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ಪತ್ರಕರ್ತರ ಹಿತ ಕಡೆಗಣನೆ ಮಾಡಿದೆ. ಪತ್ರಕರ್ತರಿಗೆ ಸಿಗಬೇಕಾದ ಸವಲತ್ತುಗಳಿಗೆ ಕತ್ತರಿ ಹಾಕುತ್ತಿದೆ. ಇದರ ವಿರುದ್ಧ ಸಂಘದಿAದ ಕಾನೂನು ಹೋರಾಟ ಮಾಡಲಾಗುವುದು ಎಂದರು.
ಸಂಘದ ಕಾನೂನು ಸಲಹೆಗಾರರಾದ ಷಡಾಕ್ಷರಪ್ಪ ಜಿ.ಆರ್. ಮಾತನಾಡಿ, ಪತ್ರಕರ್ತರ ಹಾಗೂ ಸಣ್ಣಪತ್ರಿಕೆಗಳ ಏಳಿಗೆಗೆಂದು ಸ್ಥಾಪಿಸಿರುವ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಸ್ಥಾಪನೆಯ ಉದ್ದೇಶ ಈಡೇರಿಲ್ಲ. ಪತ್ರಿಕಾ ಆಯೋಗಗಳು ಮಾಡಿರುವ ಶಿಫಾರಸ್ಸುಗಳು ಅನುಷ್ಠಾನಗೊಂಡಿಲ್ಲ. ನ್ಯೂಸ್ ಪೇಪರ್ ಡೆವಲಪ್‌ಮೆಂಟ್ ಕಾರ್ಪೋರೇಷನ್ ಸ್ಥಾಪನೆಯಾಗಿಲ್ಲ. ಪತ್ರಕರ್ತರ ರಕ್ಷಣಾ ಕಾಯ್ದೆ ಜಾರಿಗೆ ಹಲವು ದಶಕಗಳಿಂದ ಒತ್ತಡ ಹಾಕುತ್ತಿದ್ದರೂ ರಚನೆಯಾಗಿಲ್ಲ. ಈ ನಿಟ್ಟಿನಲ್ಲಿ ಪತ್ರಿಕಾ ಸಂಘಟನೆಗಳು ಕೆಲಸ ನಿರ್ವಹಿಸಬೇಕು. ಧ್ವನಿ ಸಂಘಟನೆ ಕಳೆದ ಮೂರುವರೆ ವರ್ಷಗಳಿಂದ ತನ್ನ ಹೋರಾಟ ನಡೆಸುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ಅಗಲಿದ ಹಿರಿಯ ಪತ್ರಕರ್ತರಾದ ಸಿ.ವಿ. ರಾಘವೇಂದ್ರ ರಾವ್, ಕಾಮ್ರೇಡ್ ಲಿಂಗಪ್ಪ, ಪತ್ರಿಕಾ ಛಾಯಾಗ್ರಾಹಕ ಶಿವಮೊಗ್ಗ ನಂದನ್, ಪಬ್ಲಿಕ್ ಟಿವಿ ವರದಿಗಾರ ಶಶಿಧರ, ಬಿ-ಟಿವಿ ವರದಿಗಾರ ಅನಿಲ್ ಹಾಗೂ ಸಾಗರದ ಪತ್ರಕರ್ತ ಓಂಕಾರ್ ತಾಳಗುಪ್ಪ ಇವರುಗಳಿಗೆ ಶ್ರದ್ಧಾಂಜಲಿ ಅರ್ಪಿಸಿ ನುಡಿನಮನ ಸಲ್ಲಿಸಲಾಯಿತು.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಹೆಚ್.ಎಂ. ಚಂದ್ರಶೇಖರಪ್ಪ, ಸೂಡಾ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಕಾಂಗ್ರೆಸ್ ಯುವ ನಾಯಕ ಹೆಚ್.ಸಿ. ಯೋಗೀಶ್, ನಿವೃತ್ತ ಪ್ರಾಧ್ಯಾಪಕ ಕೆ.ಜಿ. ವೆಂಕಟೇಶ್, ಅಜೇಯ ಪತ್ರಿಕೆ ಸಂಪಾದಕ ಎಂ. ಶ್ರೀನಿವಾಸನ್, ಧ್ವನಿ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಇರ್ಫಾನ್ ಬೀಳಗಿ, ಉಪಾಧ್ಯಕ್ಷ ಎಸ್.ಎಸ್. ಪಾಟೀಲ್, ದುರ್ಗಿಗುಡಿ ಶಾಲೆಯ ಮುಖ್ಯೋಪಾಧ್ಯಾಯ ಮೋಹನ್, ಜನಶ್ರೀ ಚಾನಲ್‌ನ ಸಿಇಓ ವಿಜಯ್ ಸೇರಿದಂತೆ ಹಲವರು ಆಗಮಿಸಿದ್ದರು. 
ಕಾರ್ಯಕ್ರಮಕ್ಕೆ  ಆಗಮಿಸಿದ ಗಣ್ಯರಾದ ಎಂ.ಶ್ರೀಕಾಂತ್,  ಸೂಡಾಧ್ಯಕ್ಷರಾದ ಹೆಚ್.ಸುಂದರೇಶ್, ಕಾಂಗ್ರೆಸ್ ಮುಖಂಡರಾದ ಹೆಚ್.ಸಿ.ಯೋಗೀಶ್, ವೈ.ಹೆಚ್.ನಾಗರಾಜ್, ಪತ್ರಕರ್ತರು ಮತ್ತು ಸಾಹಿತಿಗಳಾದ ಕೆ.ಜಿ.ವೆಂಕಟೇಶ್, ಅಜೇಯ ಪತ್ರಿಕೆ ಸಂಪಾದಕರಾದ ಶ್ರೀನಿವಾಸ್, ರಾಜ್ಯ ಕಮಿಟಿಯ ಪದಾಧಿಕಾರಿಗಳಾದ ಚಿಕ್ಕರಸ್ ಮತ್ತು ಜಗಳೂರು ಲಕ್ಷö್ಮಣ್‌ರಾವ್ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. 
 ದುರ್ಗಿಗುಡಿ ಮತ್ತು ಮೀನಾಕ್ಷಿ ಭವನ ಹತ್ತಿರ ಇರುವ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ೨೦೨೫-೨೬ರ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯುಲ್ಲಿ ಅತ್ಯುತ್ತಮ ಅಂಕ ಗಳಿಸಿದ  ೨೫ಕ್ಕೂ ಹೆಚ್ಚು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಪತ್ರಕರ್ತರ ವಿವಿಧ ಸಂಘಟನೆಯಲ್ಲಿ ಇದ್ದರೂ ಕೂಡಾ ಯಾವುದೇ ತಾರತಮ್ಯವಿಲ್ಲದೆ, ಬೇಧಭಾವ ಇಲ್ಲದೆ ಜಿಲ್ಲಾ ಮಟ್ಟದ ಪತ್ರಿಕೆಯ ಸಂಪಾದಕರಿಗೆ, ವರದಿಗಾರರಿಗೆ ಮತ್ತು ಪತ್ರಿಕಾ ವಿತರಿಕರಿಗೆ, ಡಿಟಿಪಿ ಆಪರೇರ‍್ಸ್, ಪ್ರಿಂಟರ್ ವಿಭಾಗದಲ್ಲಿ ಕೆಲಸ ಮಾಡಿದ ವ್ಯಕ್ತಿಗಳಿಗೆ ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು.    
ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಯಿಂದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯ ಕಮಿಟಿಯ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು ಮತ್ತು ತಾಲೂಕು ಅಧ್ಯಕ್ಷರು ಕಾರ್ಯಕ್ರಮಕ್ಕೆ ಆಗಮಿಸಿದ್ದು, ಅವರನ್ನೂ ಸಹ ಗೌರವಿಸಿ, ಸನ್ಮಾನಿಸಲಾಯಿತು. ಅದೇ ರೀತಿ ಶಿವಮೊಗ್ಗ ಜಿಲ್ಲಾ ಘಟಕದ ತಾಲೂಕು ಅಧ್ಯಕ್ಷರಿಗೆ ಮತ್ತು ಪದಾಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ, ಶಿವಮೊಗ್ಗ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಡಿ.ಜಿ. ನಾಗರಾಜ (ರಾಜು) ವಹಿಸಿದ್ದರು.  ಕಾರ್ಯಕ್ರಮದಲ್ಲಿ ಬಿ.ಸಿ. ಶಿವರಾಜ್, ಎಂ. ಅಣ್ಣಪ್ಪ, ನಂದನ್ ಕುಮಾರ್ ಸಿಂಗ್, ಮಹಮ್ಮದ್ ಫಾರೂಖ್, ಹೆಚ್.ಎಸ್.ವಿಷ್ಣುಪ್ರಸಾದ್ ಹಾಜರಿದ್ದರು.     
ಸಂಘದ ಖಜಾಂಚಿ ಬಿ.ಸಿ. ಗಿರೀಶ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಕೆ.ಎಂ. ಸತೀಶ್ ಗೌಡ ನಿರೂಪಿಸಿದರು. ಉಪಾಧ್ಯಕ್ಷ ಚಿತ್ರಪ್ಪ ಯರಬಾಳ ವಂದಿಸಿದರು. ಸಂಘದ ಸದಸ್ಯ ರಾಬರ್ಟ್ ಪ್ರಾರ್ಥಿಸಿದರು. 




ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.