ಬಿಎಸ್.ವೈ.ಕುಟುಂಬದ ಭೂ ಹಗರಣ ತನಿಖೆಯಾಗಲಿ:ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಆಗ್ರಹ

ಶಿವಮೊಗ್ಗ,ಆ.3೦: ಶಿವಮೊಗ್ಗದ ಬಿ.ಎಸ್.ವೈ.ಕುಟುಂಬದ ಭೂ ಹಗರಣಗಳನ್ನೂ ತನಿಖೆಗಳಿಗೆ ಒಳಪಡಿಸಬೇಕು ಎಂದು ಕೆಪಿಸಿಸಿ ವಕ್ತಾರ, ಮಾಜಿ ಸಂಸದ ಆಯನೂರು ಮಂಜುನಾಥ್ ಆಗ್ರಹಿಸಿದರು.
ಅವರು ಶುಕ್ರವಾರ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿ.ವೈ.ವಿಜಯೇಂದ್ರ, ಬಿ.ವೈ.ರಾಘವೇಂದ್ರ ಮತ್ತು ಬಿಜೆಪಿಯ ಮುಖಂಡರು ಮೂಡಾ ಹಗರಣದ ಬಗ್ಗೆ ಮಾತನಾಡುತ್ತಾರೆ. ಪಾದಯಾತ್ರೆ ಮಾಡುತ್ತಾರೆ.  ನೈತಿಕತೆ ಇದ್ದರೆ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎನ್ನುತ್ತಾರೆ. ಆದರೆ, ಇವರೇ ಭೂಗಳ್ಳರಾಗಿದ್ದಾರೆ, ಇವರಿಗೆ ರಾಜೀನಾಮೆ ಕೇಳುವ ಯಾವ ನೈತಿಕತೆ ಇದೆ ಎಂದು ಪ್ರಶ್ನೆ ಮಾಡಿದರು.
ತೀರ್ಥಹಳ್ಳಿ ರಸ್ತೆಗೆ ಹೋಗುವ ನ್ಯೂಮಂಡ್ಲಿ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಯಾರ ಆಸ್ಪತ್ರೆ ಇದೆ. ಸಹ್ಯಾದ್ರಿ ನಾರಾಯಣ ಹೃದಯಾಲಯ ಯಾರ ಒಡೆತನದ್ದು, ಅಲ್ಲಿ ೩೦ ಎಕರೆಗೂ ಹೆಚ್ಚು ಜಮೀನು ಇರುವುದು ಯಾರದ್ದು ಎಂದ ಅವರು, ೩೦ ಎಕರೆ ಜಮೀನು ಇದ್ದರೂ ಕೂಡ ಕೆಐಡಿಬಿಯವರು ಕೇವಲ ೪ ಎಕರೆ ಜಾಗವನ್ನು ಹೇಗೆ ವಶಪಡಿಸಿಕೊಂಡರು, ಕೈಗಾರಿಕಾ ಅಭಿವೃದ್ಧಿಗೆ ೪ ಎಕರೆ ಜಾಗ ಸಾಕೇ? ಹೀಗೆ ವಶಪಡಿಸಿಕೊಂಡ ಜಾಗ, ಏನಾಯಿತು, ಯಾರ ಬೇನಾಮಿ ಹೆಸರಿನಲ್ಲಿತ್ತು. ನಂತರ ಯಾರಿಗೆ ವರ್ಗಾವಣೆಯಾಗಿದೆ ಎಂಬುವುದನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸಂಸದ ರಾಘವೇಂದ್ರ ಹೇಳಬೇಕು ಎಂದರು.
ಪತ್ರಕರ್ತರ ನಿವೇಶನಕ್ಕೆ ಸಂಬಂಧಿಸಿದಂತೆ ಮೂಡಾ ಹಗರಣದಂತೆ ಶಿವಮೊಗ್ಗದಲ್ಲಿಯೂ ಹಗರಣವಾಗಿದೆ. ಪತ್ರಕರ್ತರಲ್ಲದವರ ಹೆಸರಿಗೆ ನಿವೇಶನ ಪಡೆದುಕೊಂಡು ನಂತರ ಅದನ್ನು ಯಾರೂ ಪಡೆದರು, ಯಾರ ಮನೆಯ ಕೆಲಸಗಾರರಿಗೆ ಈ ನಿವೇಶನಗಳನ್ನು ಹಂಚಲಾಗಿದೆ.ಈ ಕುಟುಂಬಕ್ಕೆ ಕಾರ್ಮಿಕರ ಹೆಸರಿನಲ್ಲಿ ಸೈಟ್ ಪಡೆದು ನಂತರ ಬೇನಾಮಿಯಾಗಿ ಪಡೆಯಬೇಕಿತ್ತೆ ಇಂತಹ ಭ್ರಷ್ಟಚಾರದಲ್ಲಿ ಮುಳುಗಿರುವ ಇವರು ಯಾವ ನೈತಿಕತೆ ಇಟ್ಟುಕೊಂಡಿದ್ದಾರೆ ಎಂದರು.
ಇದಕ್ಕೆಲ್ಲ ಅವರು, ಉತ್ತರ ಹೇಳಬೇಕು. ಸತ ಹೊರಗೆ ಬರುತ್ತದೆ, ಇಲ್ಲದಿದ್ದರೆ ನಾವೇ ದಾಖಲೆ ಸಮೇತ ಹೇಳುತ್ತೇವೆ. ಭೂಮಿ ದಾಹದ ಆಸ್ತಿ ವ್ಯಾಮೋಹದ ಅಧಿಕಾರ ದುರುಪಯೋಗದ ಬಹುದೊಡ್ಡ ಹಗರಣಗಳು ಬಿಜೆಪಿಯ ಮುಖಂಡರ ಮೇಲಿದೆ. ಇವರು ಮೈಸೂರಿಗೆ ಪಾದಯಾತ್ರೆ ಮಾಡುವುದಲ್ಲ, ಶಿವಮೊಗ್ಗಕ್ಕೂ ಪಾದಯಾತ್ರೆ ಮಾಡಬೇಕು. ಕೆಎಡಿಬಿಯನ್ನು ದುರುಪಯೋಗ ಪಡಿಸಿಕೊಂಡ ಬೇನಾಮಿ ಹೆಸರಿನಲ್ಲಿ ಆಸ್ತಿ ಮಾಡಿಕೊಂಡ ಎಲ್ಲವೂ ತನಿಖೆಯಾಗಬೇಕು ಎಂದರು.
ಬಿಜೆಪಿಯ ಪ್ರತಿಭಟನೆಗಳು, ಪಾದಯಾತ್ರೆಗಳು, ನಡೆಯುತ್ತಿರುವುದು, ರೈತರ ಸಮಸ್ಯೆ ಅಲ್ಲ, ಅತಿವೃಷ್ಠಿ, ಅನಾವೃಷ್ಠಿ ಅಲ್ಲ, ಬಡವರ ಬಗ್ಗೆಕಾಳಜಿಯಿಂದನೂ ಅಲ್ಲ, ಕೇವಲ ಕಾಂಗ್ರೆಸ್ ನಾಯಕರಿಗೆ ಮಸಿ ಬಳಿಯುವುದು ಅಷ್ಟೇ ಆಗಿದೆ. ಮೂಡಾ ಹಗರಣವೇ ಇದಕ್ಕೆ ಸಾಕ್ಷಿ, ಅವರದೇ ಸರ್ಕಾರದಲ್ಲಿ ಅವರೇ ಮಂಜೂರು ಮಾಡಿದ ಸೈಟ್‌ನ ಬಗ್ಗೆ ಮಾತನಾಡುತ್ತಾರೆ. ಕಾಂಗ್ರೆಸ್ ಹೆಗಲ ಮೇಲೆ ಬಂದೂಕು ಹಿಡಿಯುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಂಐಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಪ್ರಮುಖರಾದ ಎಸ್.ಕೆ.ಮರಿಯಪ್ಪ, ಡಾ|| ಶ್ರೀನಿವಾಸ್ ಕರಿಯಣ್ಣ, ಎಸ್.ರವಿಕುಮಾರ್, ವೈ.ಹೆಚ್.ನಾಗರಾಜ್, ಜಿ.ಡಿ.ಮಂಜುನಾಥ್, ಯು. ಶಿವಾನಂದ್, ಶಿವಣ್ಣ, ಧೀರರಾಜ್, ಲಕ್ಷ್ಮಣ್ಣಪ್ಪ, ಎಚ್ ಎಂ.ಮಧು, ಹಿರಣ್ಣಯ್ಯ ಮುಂತಾದವರಿದ್ದರು.


ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.