ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘ ಹಾಗೂ ಎಸ್.ರುದ್ರೇಗೌಡರಅಭಿನಂದನಾ ಸಮಿತಿಯಿಂದ ಜ. 27 ರಂದು ಪ್ಲೇಟ್ ಬ್ಯಾಂಕ್‌ ಲೋಕಾರ್ಪಣೆ

ಶಿವಮೊಗ್ಗ: ಖ್ಯಾತ ಕೈಗಾರಿಕೋದ್ಯಮಿಗಳು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಸ್.ರುದ್ರೇಗೌಡರ ಅಭಿನಂದನಾ ಕಾರ್ಯಕ್ರಮದ ಅಂಗವಾಗಿ ಜ. 27 ರಂದು ಬೆಳಗ್ಗೆ ಪರಿಸರ ಜಾಗೃತಿಗಾಗಿ ಪ್ಲೇಟ್ ಬ್ಯಾಂಕ್‌ ಲೋಕಾರ್ಪಣೆಗೊಳ್ಳಲಿದೆ ಎಂದು ವೀರಶೈವ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್ ಮತ್ತು ಅಭಿನಂದನಾ ಸಮಿತಿಯ ಅಧ್ಯಕ್ಷರಾದ ಡಿ.ಜಿ. ಬೆನಕಪ್ಪ ಹೇಳಿದರು.
ಇಂದು ಮಧ್ಯಾಹ್ನ ಖಾಸಾಗಿ ಹೋಟೆಲ್ ಶುಭಮಂಗಳ ಸಭಾಭವನದಲ್ಲಿ ಜಂಟಿ ಸುದ್ದಿ ಗೋಷ್ಟಿ ನಡೆಸಿ ಮಾತನಾಡಿದರು.ಶಿವಮೊಗ್ಗ ನಗರದ ಹಾಗೂ ಜಿಲ್ಲೆಯ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಸವೇಶ್ವರ ವೀರಶೈವ ಸೇವಾ ಸಮಾಜ, ಎಸ್.ರುದ್ರೇಗೌಡರ ಅಭಿನಂದನಾ ಸಮಿತಿ, ರುದ್ರೇಗೌಡರ ಅಭಿಮಾನಿ ಬಳಗದ ಸಂಯುಕ್ತಾಶ್ರಯದಲ್ಲಿ ಈ ಯೋಜನೆಯನ್ನು ಬೆಂಗಳೂರಿನ ಅದಮ್ಯ ಚೇತನ ಫೌಂಡೇಷನ್ನಿನ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಲೋಕಾರ್ಪಣೆ ಮಾಡಲಿದ್ದಾರೆ ಎಂದರು.

ಸಾರ್ವಜನಿಕರು ಹಮ್ಮಿಕೊಳ್ಳುವ ಯಾವುದೇ ಸಭೆ, ಸಮಾರಂಭ ಇತರೆ ಕಾವ್ಯಗಳಲ್ಲಿ ಪ್ಲಾಸ್ಟಿಕ್, ಪೇಪರ್ ತಟ್ಟೆಗಳನ್ನು ಬಳಸದೇ ಶೂನ್ಯ ತ್ಯಾಜ್ಯ ಪದ್ಧತಿ ಪ್ರೋತ್ಸಾಹಿಸುವುದು ಇದರ ಉದ್ದೇಶ, ಪ್ಲೇಟ್ ಬಳಕೆಯಿಂದ ಕನಿಷ್ಠ ಶೇ. 25 ರಷ್ಟು ಘನ ತ್ಯಾಜ್ಯ ಕಡಿಮೆ ಮಾಡಬಹುದಾಗಿದ್ದು, ಈ ನಿಟ್ಟಿನಲ್ಲಿ ಪ್ಲೇಟ್ ಸಹಕಾರಿಯಾಗಲಿದೆ. 5000 ಸಾವಿರ ಊಟದ ಸ್ಟೀಲ್ ತಟ್ಟೆ, 2000 ಸಾವಿರ ಲೋಟ, ಟೀ ಮತ್ತು ಕಾಫಿ ಕಪ್‌ಗಳು ಹಾಗೂ ಚಮಚಗಳು ಪ್ಲೇಟ್ ಬ್ಯಾಂಕ್‌ನಲ್ಲಿ ಲಭ್ಯವಿರುತ್ತದೆ. ಅಗತ್ಯ ಸಂದರ್ಭಗಳಲ್ಲಿ ಎಲ್ಲರೂ ಇದರ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಇದು ಬಳಕೆದಾರರಿಗೆ ಉಚಿತವಾಗಿದೆ ಎಂದರು.

ನಗರದ ನೆಹರೂ ರಸ್ತೆಯ ಶ್ರೀ ಬಸವೇಶ್ವರ ಸಮಾಜಕ್ಕೆ ಪ್ಲೇಟ್ ಬ್ಯಾಂಕನ್ನು ಹಸ್ತಾಂತರ ಮಾಡಿದ ನಂತರ ಸಮಾಜವು ಅದರ ನಿರ್ವಹಣೆ ಮಾಡಲಿದೆ. ಸ್ಟೀಲ್ ಪರಿಕರಗಳು ಅಗತ್ಯವಿದ್ದಲ್ಲಿ ಮುಂಗಡವಾಗಿ ಹಣವನ್ನು ಕಾಯ್ದಿರಿಸಿ, ವಸ್ತುಗಳನ್ನು ವಾಪಾಸು ಕೊಟ್ಟ ನಂತರ ಹಣವನ್ನು ನೀಡಲಾಗುತ್ತದೆ, ಈ ಸೇವೆ ಸಂಪೂರ್ಣ ಉಚಿತವಾಗಿದ್ದು, ಡಿಶ್ ವಾಷರ್ ಕೊಡಲಾಗುತ್ತದೆ ಎಂದರು.

ಇದೊಂದು ಮಾದರಿಯ ಕಾರ್ಯವಾಗಿದ್ದು,ಯಾವುದೇ ಸಮಾರಂಭಗಳಲ್ಲಿ ತಟ್ಟೆ, ಸ್ಟೀಲ್ ಲೋಟಗಳನ್ನು ಬಳಸುವುದು ಒಳ್ಳೆಯದು. ಏಕೆಂದರೆ ಪ್ಲಾಸ್ಟಿಕ್ ತಟ್ಟೆ, ಲೋಟ ಬಳಸಿದ ನಂತರ ಭೂಮಿಗೆ ಬಿಸಾಡುವುದರಿಂದ ಭೂಮಿ ಮತ್ತು ಪರಿಸರಕ್ಕೆ ಸಾಕಷ್ಟು ಹಾನಿಯುಂಟಾಗುತ್ತದೆ. ನಾವು ಬಳಸಿ ಭೂಮಿಗೆಸೆಯುವ ಪ್ಲಾಸ್ಟಿಕ್‌ ಸುಮಾರು 200 ವರ್ಷಗಳ ಕಾಲ ಕೊಳೆಯೋದಿಲ್ಲ, ಪ್ಲಾಸ್ಟಿಕ್‌ ಬಿದ್ದ ಜಾಗದಲ್ಲಿ ಯಾವುದೇ ಸಸ್ಯವೂ ಬೆಳೆಯೋದಿಲ್ಲ. ಒಂದು ಚಿಟಿಗೆ ಹೊಡೆಯುವಷ್ಟರಲ್ಲಿ 1ಮಿಲಿಯನ್ ಪ್ಲಾಸ್ಟಿಕ್ ವಾಟರ್ ಬಾಟಲ್ ಸೇಲ್ ಆಗುತ್ತಿದೆ. ಒಂದು ವರ್ಷಕ್ಕೆ ಸುಮಾರು 3 ಟ್ರಿಲಿಯನ್ ಪ್ಲಾಸ್ಟಿಕ್ ಬ್ಯಾಗ್‌ಗಳು ಸೇಲ್ ಆಗುತ್ತಿದೆ, ಆದರೆ, ಬಳಸುವ ಪ್ಲಾಸ್ಟಿಕ್ ಶೇ.10 ರಷ್ಟು ಮಾತ್ರ ರೀ ಸೈಕ್ಲಿಂಗ್ ಆಗುತ್ತಿದೆ, ಉಳಿದ್ದೆಲ್ಲವೂ ಭೂಮಿಯನ್ನು ಸೇರುತ್ತಿದೆ. ಹೀಗೆ ಭೂಮಿಗೆಸೆಯುವ ಪ್ಲಾಸಿಕ್‌ ಗಾಳಿ, ನೀರು ಹಾಗೂ ಆಹಾರದ ಮೂಲಕ ಕಣಗಳ ರೂಪದಲ್ಲಿ ಮನುಷ್ಯನ ದೇಹವನ್ನು ಗೊತ್ತಿಲ್ಲದ ಹಾಗೆ ಸೇರಿಕೊಳ್ಳುತ್ತಿದೆ. ಒಬ್ಬ ಮನುಷ್ಯ ಒಂದು ವರ್ಷಕ್ಕೆ ಏನಿಲ್ಲವೆಂದರೂ ಒಂದು ಎಟಿಎಂ ಕಾರ್ಡ್‌ಷ್ಟು ಪ್ಲಾಸ್ಟಿಕ್ ನ್ನು ಸೇವಿಸುತ್ತಿದ್ದಾನೆ, ಮನುಷ್ಯನ ನಿಷ್ಕಾಳಜಿಯಿಂದಾಗಿ ಕುಡಿಯುವ ನೀರು, ಗಾಳಿ, ಮಣ್ಣು ಎಲ್ಲವೂ ಕುಲುಷಿತಗೊಳ್ಳುತ್ತಿದೆ ಎಂದರು.

 ಶಿವಮೊಗ್ಗ ನಗರವೊಂದರಿಂದಲೇ ಅನುಪಿನಕಟ್ಟೆ ತ್ಯಾಜ್ಯ ವಿಲೇ ಘಟಕ್ಕೆ ಪ್ರತಿ ದಿನ 161 ಮೆಟ್ರಿಕ್ ಟನ್ ತ್ಯಾಜ್ಯವಿಲೇ ಆಗುತ್ತಿದೆ. ಹೆಚ್ಚುತ್ತಿರುವ ಜನಸಂಖ್ಯೆ, ಬೆಳೆಯುತ್ತಿರುವ ಪಟ್ಟಣ, ನಗರ ಹಾಗೂ ಮಹಾನಗರ ಪ್ರದೇಶಗಳಲ್ಲಿ ತ್ಯಾಜ್ಯ ಹೆಚ್ಚುತ್ತಲೇ ಇದೆ, ವಿಲೇವಾರಿಯೂ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಮಹಾನಗರ ಮುಂಬೈನಲ್ಲಿ ಪ್ರತಿ ದಿನಕ್ಕೆ 7,500 ಟನ್, ದೆಹಲಿಯಲ್ಲಿ ಪ್ರತಿದಿನ 11,332 ಟನ್ ಘನತ್ಯಾಜ್ಯ ಉತ್ಪಾದನೆಯಾದರೆ, ಇದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯವೇ 689.8 ಟನ್ ಉತ್ಪಾದನೆಯಗುತ್ತಿದೆ. ಇದು ಭಾರತದ ಮೆಟ್ರೋಪಾಲಿಟನ್ ನಗರಗಳಲ್ಲಿ ಅತ್ಯಧಿಕ. ಹಾಗೆಯೇ ಕೋಲ್ಕತ್ತಾ ಮತ್ತು ಚೆನ್ನೈ ಅನುಕ್ರಮವಾಗಿ 429.5 ಮತ್ತು 429.4 ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ಮಹಾನಗರಗಳಲ್ಲಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ತ್ಯಾಜ್ಯ ಸಂಗ್ರಹವಾಗುತ್ತಿರುವುದು ಸಮರ್ಪಕ ವಿಲೇವಾರಿಗೆ ಸಮಸ್ಯೆಯಾದರೆ, ಮತ್ತೊಂದೆಡೆ ಪರಿಸರ ಹಾಗೂ ಜನರ ಆರೋಗ್ಯದ ಮೇಲೂ ದುಷ್ಪರಿಣಾಮವನ್ನು ಬೀರುತ್ತಿದೆ. ಪ್ಲೇಟ್ ಬ್ಯಾಂಕ್‌ನಂತಹ ಯೋಜನೆ ಪರಿಸ್ನೇಹಿಯಾಗಲಿದೆ. ಇದರ ಲಾಭವನ್ನು ಅಗತ್ಯ ಇದ್ದವರು ಪಡೆದುಕೊಳ್ಳಬಹುದು ಎಂದರು.

ಪತ್ರಿಕಾಗೋಷ್ಟಿಯಲ್ಲಿ  ,ಪಿ.ರುದ್ರೇಶ್,ಸಂತೋಷ್ ಬಳ್ಳಕೆರೆ, ಮೋಹನ್ ಮತ್ತಿತರರು ಹಾಜರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.