ಬಹುತ್ವದ ಉಳಿವಿಗೆ ಪೂರಕವಾದ ಪತ್ರಿಕೋದ್ಯಮ ಇಂದಿನ ಅಗತ್ಯ: ಕಿಮ್ಮನೆ ರತ್ನಾಕರ್

ಹೊಸನಗರ,ಜು.೧೯: ಬಹುತ್ವದ ಉಳಿವಿಗೆ ಪೂರಕವಾದ ಪತ್ರಿಕೋದ್ಯಮ ಇಂದಿನ ಅಗತ್ಯವಾಗಿದೆ. ಹಿಂಸೆಯನ್ನು ಪ್ರಚೋದಿಸುವ ವರದಿಗಾರಿಕೆಯಿಂದ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಹೊಸನಗರ ತಾಲೂಕು ಘಟಕವು ಇಲ್ಲಿನ ಈಡಿಗರ ಭವನದಲ್ಲಿ ಬುಧವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ,ಮಾದಕ ವ್ಯಸನ ಜಾಗೃತ ಅಭಿಯಾನ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
 ಪತ್ರಕರ್ತರು ರಂಜನೆಗಿಂತ ವಾಸ್ತವಕ್ಕೆ ಆದ್ಯತೆ ನೀಡಬೇಕು. ಪತ್ರಿಕೆ ಒಮ್ಮೆ ಮುದ್ರಣಗೊಂಡು ಹೊರಬಿದ್ದರೆ ಅದು ಸಾರ್ವಜನಿಕ ಸ್ವತ್ತಾಗುತ್ತದೆ ಆ ಕಾರಣದಿಂದ ಮುದ್ರಿಸುವ ಮುನ್ನ ಸರಿಯಾಗಿ ಪರಿಶೀಲನೆ ಮಾಡಬೇಕು. ಸಮಾಜದ ಸಾಮರಸ್ಯಕ್ಕೆ ಧಕ್ಕೆಯಾಗದ ಬರಹದಿಂದ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದರು.
ಪತ್ರಕರ್ತರು ಸಾಹಿತ್ಯವನ್ನು ಚೆನ್ನಾಗಿ ಓದಬೇಕು. ಅಧ್ಯಯನಶೀಲ ಪತ್ರಕರ್ತರಿಂದ ಉತ್ತಮ ಪತ್ರಿಕೋದ್ಯಮ ಸಾಧ್ಯ. ಇಂದು ವ್ಯಸನ ಮುಕ್ತ ಸಮಾಜಕ್ಕೆ ನಿರ್ಮಾಣ ಮಾಡುವ ಉದ್ದೇಶದಿಂದ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲೆಯಾದ್ಯಂತ ಅಭಿಯಾನ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಯುವಜನರು ಮತ್ತು ವಿದ್ಯಾರ್ಥಿಗಳು ಮೊಬೈಲ್ ಎಂಬ ಹೊಸ ವ್ಯಸನ ಅಂಟಿಸಿಕೊಂಡಿದ್ದಾರೆ. ಸಮಾಜದಲ್ಲಿನ ಪಿಡುಗಗಳನ್ನು ತೊಡೆದುಹಾಕುವಲ್ಲಿ ಪತ್ರಕರ್ತರ ಪಾತ್ರ ಮಹತ್ವವಾದುದು ಎಂದು ಕಿಮ್ಮನೆ ರತ್ನಾಕರ್ ಅಭಿಪ್ರಾಯಪಟ್ಟರು.
ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ಮಾತನಾಡಿ, ಸುದ್ದಿ ಮನೆಯ ಜಂಜಾಟದಲ್ಲಿರುವ ಪತ್ರಕರ್ತರು ಸಾಮಾಜಿಕ ಕಾಳಜಿಯಿಂದ ಮಾದಕ ವಸ್ತು ಜಾಗೃತಿ ಮೂಡಿಸುವ ಅಭಿಯಾನ ಮಾಡುತ್ತಿರುವುದು ಶ್ಲಾಘನೀಯವಾದ ಕೆಲಸ. ಇಂದು ಶಾಲಾ ಕಾಲೇಜುಗಳಲ್ಲಿ ಗಾಂಜಾದಂತಹ ಮಾದಕ ವಸ್ತುಗಳು ವಿದ್ಯಾರ್ಥಿ ಸಮೂಹವನ್ನು ತಪ್ಪುದಾರಿಗೆ ಎಳೆಯುತ್ತವೆ. ಈ ಅನಿಷ್ಠಗಳ ವಿರುದ್ಧ ಎಲ್ಲರೂ ಒಂದಾಗಿ ಹೋರಾಟ ಮಾಡಬೇಕಿದೆ. ವಿದ್ಯಾರ್ಥಿಗಳು ಅನ್ಯ ಸಂಗತಿಗಳಿಗೆ ಗಮನಕೊಡದೆ ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಬೇಕು. ಕಠಿಣ ಪರಿಶ್ರಮದಿಂದ ಗುರಿ ಸಾಧಿಸಲು ಸಾಧ್ಯ ಎಂದು ಹೇಳಿದರು.
ಮಾದಕ ವ್ಯಸನಗಳ ದುಷ್ಪರಿಣಾಮ ಕುರಿತು ಉಪನ್ಯಾಸ ನೀಡಿದ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಹೆಚ್.ಕೆ.ಶ್ರೀಪತಿ ಹಳಗುಂದ ಅವರು, ಪ್ರಾಣಿಗಳು ಬೇಕಾದ್ದನ್ನು ಮಾತ್ರ ತಿನ್ನುತ್ತವೆ. ಆದರೆ ಮನುಷ್ಯರಾದ ನಮ್ಮ  ದೇಹಕ್ಕೆ ಬೇಡವಾದದ್ದನ್ನೂ ತಿನ್ನುತ್ತೇವೆ. ಇದನ್ನೇ ವ್ಯಸನ ಎಂದು ಕರೆಯುತ್ತೇವೆ. ನಮ್ಮನ್ನು ನಾವು ಸಾಯಿಸಿಕೊಳ್ಳುವ ಈ ಪ್ರಕ್ರಿಯೆಯೇ ಪ್ರಳಯ. ಮಕ್ಕಳು ತಮ್ಮ ಆರೋಗ್ಯ ಹಾಗೂ ಭವಿಷ್ಯದ ಬಗ್ಗೆ ಜಾಗೃತರಾಗಿರಬೇಕು.ಪೋಷಕರು ಹಾಗೂ ಶಿಕ್ಷಕ ವರ್ಗವೂ ಆದರ್ಶವಾಗಿದ್ದು, ಮಕ್ಕಳಿಗೆ ಮಾದರಿಯಾಗಬೇಕು ಎಂದು ಅಭಿಪ್ರಾಯಪಟ್ಟರು.
ಮಕ್ಕಳಿಗೆ ದೇಶ ಕಾಯುವ ಸೈನಿಕ ಮತ್ತು ಅನ್ನಕೊಡುವ ರೈತ ಮಾದರಿ ವ್ಯಕ್ತಿಗಳಾಗಬೇಕು. ಸಿಗರೇಟ್ ಸೇದುವುದನ್ನು ಸಿನೆಮಾದಲ್ಲಿ ತೋರಿಸುವ ಚಿತ್ರನಟರಾಗಬಾರದು. ನೂರು ವರ್ಷ ಬಾಳುವ ಮನುಷ್ಯ ಅರ್ಧ ಆಯುಷ್ಯಕ್ಕೆ ಹೈರಾಣಾಗುತ್ತಾನೆ ಎಂದರೆ ನಮ್ಮ ಆರೋಗ್ಯ ಮತ್ತು ದುಶ್ಚಟಗಳೇ ಅದಕ್ಕೆ ಕಾರಣ ಎಂದು ಹೇಳಿದರು.
ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಗೋಪಾಲ್ ಎಸ್ ಯಡಗೆರೆ ಮಾತನಾಡಿ, ಪತ್ರಕರ್ತರ ಸಂಘದಿಂದ ಸಮಾಜಮುಖಿ ಕೆಲಸದ ಸಂಕಲ್ಪಮಾಡಲಾಗುತ್ತಿದೆ. ಕುಗ್ರಾಮಗಳಿಗೆ ಹೋಗಿ ಅಲ್ಲಿನ ವಾಸ್ತವದ ವರದಿ ಮಾಡಿ ಸರಕಾರದ ಗಮನ ಸೆಳೆಯುವ ಕೆಲಸ ಎಲ್ಲಾ ತಾಲೂಕು ಘಟಕಗಳಿಂದಲೂ ನಡೆಯಲಿದೆ ಎಂದು ಹೇಳಿದರು. ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಮಾತನಾಡಿ, ಪತ್ರಕರ್ತರು ನೊಂದವರ ಧ್ವನಿಯಾಗಿ ಕೆಲಸ ಮಾಡಬೇಕೆಂದು ಹೇಳಿದರು. ಕಾರ್ಯಕ್ರಮದಲ್ಲಿ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತರಾದ ನಾಗರಾಜ್ ನೇರಿಗೆ, ಹೊನ್ನಾಳಿ ಚಂದ್ರಶೇಖರ್, ಹತ್ತನೇ ತರಗತಿಯಲ್ಲಿ ತಾಲೂಕಿನಲ್ಲಿ ಅತಿಹೆಚ್ಚು ಅಂಕ ಪಡೆದ ಕುಮಾರಿ ಅನ್ವಿತಾ , ಪತ್ರಿಕಾ ಏಜೆಂಟರು ಮತ್ತು ವಿತರಕರನ್ನು ಸನ್ಮಾನಿಸಲಾಯಿತು. ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ ಹಾಜರಿದ್ದರು. ತಾಲೂಕು ಅಧ್ಯಕ್ಷ ವೆಂಕಟೇಶ್ ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತರ ವಾಸಪ್ಪ ಪ್ರಾಸ್ತಾವಿಕ ಮಾತನಾಡಿದರು. ನಗರ ರಾಘವೇಂದ್ರ ಸ್ವಾಗತಿಸಿದರು. ರವಿರಾಜ್ ಭಟ್ ವಂದಿಸಿದರು. ಕಾರ್ಯಕ್ರಮವನ್ನು ಸೆಬಾಸ್ಟಿನ್ ನಿರೂಪಿಸಿದರು. ಸರಕಾರಿ ಪ್ರೌಢ ಶಾಲೆ ವಿದ್ಯಾರ್ಥಿನಿಯರು ಪ್ರಾರ್ಥನೆ ಮಾಡಿದರು. 

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.