ಪತ್ರಕರ್ತ ಹಾಲಸ್ವಾಮಿಗೆದಾವಣಗೆರೆ ಎಸ್ಪಿ ಸಿ.ಬಿ.ರಿಷ್ಯಂತ್ ಕಿರುಕುಳ : ಮುಖ್ಯಮಂತ್ರಿಗೆ ಮನವಿ

ಶಿವಮೊಗ್ಗ, ಪತ್ರಕರ್ತ ಹಾಲಸ್ವಾಮಿ ಅವರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಕಿರುಕುಳ ನೀಡಿರುವ ದಾವಣಗೆರೆ ಎಸ್ಪಿ ಸಿ.ಬಿ.ರಿಷ್ಯಂತ್ ಅವರು ಕ್ಷಮೆ ಕೇಳದಿದ್ದಲ್ಲಿ ಶಿವಮೊಗ್ಗದಲ್ಲಿ ನಡೆವ ಗೃಹ ಸಚಿವರ ಕಾರ್ಯಕ್ರಮ ಬಹಿಷ್ಕರಿಸುವುದಾಗಿ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಎಚ್ಚರಿಸಿವೆ.
ಶುಕ್ರವಾರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ಸಂಘಟನೆಗಳು,  ದಿನಾಂಕ ೨೭-೨-೨೦೨೩ ರಂದು ಶಿವಮೊಗ್ಗ ಹೊರವಲಯದ ಸೋಗಾನೆಯಲ್ಲಿ ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮ ನಡೆದದ್ದು ಸರಿಯಷ್ಟೆ. ಅಂದಿನ ಕಾರ್ಯಕ್ರಮಕ್ಕೆ ಮಾನ್ಯ ಪ್ರಧಾನ ಮಂತ್ರಿಗಳು ಮತ್ತು ಮುಖ್ಯಮಂತ್ರಿಗಳಾದ ತಾವು ಬಂದಿದ್ದೀರಿ. ಅಂದಿನ ಕಾರ್ಯಕ್ರಮಕ್ಕೆ ಇದ್ದ ಶಿಷ್ಟಾಚಾರಗಳಿಗೆ ಅನುಸಾರವಾಗಿ ಮಾಧ್ಯಮಗಳಿಗೆ ವರದಿ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ರಾಜ್ಯ ಹಾಗೂ ಶಿವಮೊಗ್ಗದ ವಿವಿಧ ಮಾಧ್ಯಮ ಪ್ರತಿನಿಧಿಗಳು ಆಗಮಿಸಿದ್ದರು. ಈ ಸಂದರ್ಭ ಪತ್ರಿಕಾ ವರದಿಗೆ ಬಂದಿದ್ದ ಸ್ಥಳೀಯ ಭಾರತ್ ಟಿ.ವಿ.ಸಂಪಾದಕ ಆರ್.ಎಸ್.ಹಾಲಸ್ವಾಮಿ ಎಂಬ ನಮ್ಮ ಸಹೋದ್ಯೋಗಿಗೆ ಅಂದಿನ ಭದ್ರತೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ದಾವಣಗೆರೆ ಎಸ್ಪಿ ಶ್ರೀ ರಿಷ್ಯಂತ್ ಅವರು, ಹಾಲಸ್ವಾಮಿ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ.  ಕ್ಯಾಮೆರಾ ಕಸಿದುಕೊಂಡು ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದಾರೆ. ಅಪಾರ ಜನಸಂದಣಿಯಲ್ಲಿ ನೂಕು ನುಗ್ಗಲಾಗಿದ್ದನ್ನು ಚಿತ್ರೀಕರಣ ಮಾಡುತ್ತಿದ್ದ ಅವರನ್ನು ಹಿಡಿದು, ಅಪರಾಧಿಯಂತೆ ಪೊಲೀಸ್ ವಾಹನದಲ್ಲಿ ಕೂಡಿಹಾಕಿದ್ದು, ಮಾತ್ರವಲ್ಲದೆ ಮೊಬೈಲ್‌ನ ವಿಡಿಯೊ ಡಿಲಿಟ್ ಮಾಡಲಾಗಿದೆ. ಈ ಕೃತ್ಯವನ್ನು ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಶಿವಮೊಗ್ಗ ಪ್ರೆಸ್ ಟ್ರಸ್ಟ್ ತೀವ್ರವಾಗಿ ಖಂಡಿಸುತ್ತದೆ.
ಪತ್ರಕರ್ತರಿಗೆ ಮುಕ್ತ ಹಾಗೂ ನ್ಯಾಯ ಸಮ್ಮತ ಕಾರ್ಯನಿರ್ವಹಿಸಲು ಅಡ್ಡಿ ಮಾಡಿರುವ ದಾವಣಗೆರೆ ಎಸ್ಪಿಯವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅವರು ಕೂಡಲೇ ಪತ್ರಕರ್ತ ಸಮೂಹದ ಕ್ಷಮೆ ಕೇಳಬೇಕೆಂದು ಆಗ್ರಹಿಸುತ್ತಿದ್ದೇವೆ. ಸಿ.ಬಿ.ರಿಷ್ಯಂತ್ ಅವರು ಆದ ಪ್ರಮಾದಕ್ಕೆ ಕ್ಷಮೆ ಕೋರದಿದ್ದಲ್ಲಿ ಮುಂದಿನ ದಿನಗಳಲ್ಲಿ ಗೃಹ ಸಚಿವರು ಭಾಗವಹಿಸುವ ಕಾರ್ಯಕ್ರಮಗಳನ್ನು ಬಹಿಷ್ಕರಿಸುವುದಾಗಿ ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಮನವಿ ಯಲ್ಲಿ ತಿಳಿಸಲಾಗಿದೆ.
ಮನವಿ ಸ್ವೀಕರಿಸಿದ ಎಡಿಸಿ ಡಾ.ಲೋಕೇಶ್ ಅವರು, ಮುಖ್ಯಮಂತ್ರಿಗಳಿಗೆ ಕಳಿಸುವುದಾಗಿ ತಿಳಿಸಿದರು. ಈ ಸಂದರ್ಭ ,ಶಿವಮೊಗ್ಗ ಪ್ರೆಸ್ ಟ್ರಸ್ಟ್,ಅಧ್ಯಕ್ಷರ ಎನ್.ಮಂಜುನಾಥ್, ಕಾರ್ಯದರ್ಶಿ ನಾಗರಾಜ್ ನೇರಿಗೆ.   ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಎಸ್ ಯಡಗೆರೆ, ಪ್ರಧಾನ ಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ, ಹಿರಿಪತ್ರಕರ್ತರಾದ ಶೃಂಗೇಶ್, ವೈ.ಕೆ.ಸೂರ್ಯನಾರಾಯಣ, ಆರಗ ರವಿ, ಹೊನ್ನಾಳಿ ಚಂದ್ರಶೇಖರ್, ಶಿ.ಜು.ಪಾಶ, ಪಿ.ಜೇಸುದಾಸ್, ವಿ.ಸಿ.ಪ್ರಸನ್ನ, ದತ್ತಾತ್ರೇಯ ಹೆಗಡೆ, ಮೋಹನಕೃಷ್ಣ, ಕಿರಣ್ ಕಂಕಾರಿ, ಭರತ್, ಲಿಯಾಕತ್, ಹಲೋ ಶಿವಮೊಗ್ಗ ನಾಗರಾಜ್ ಡಿ.ಜಿ.,ಸಾವಂತ್, ಶಿವಮೊಗ್ಗ ನಾಗರಾಜ್ ಮತ್ತಿತತರರು ಹಾಜರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.