*ವಿವೇಕಾನಂದರು ಯುವಜನತೆಯ ದಾರಿದೀಪ : ಜಿಲ್ಲಾಧಿಕಾರಿಗಳು*

ಶಿವಮೊಗ್ಗ, 12 ಜನವರಿ;
     ಯುವಜನತೆಗೆ ದಾರಿದೀಪವಾಗಿರುವ, ದೇಶದ ಹೆಮ್ಮಯಾಗಿರುವ ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ನಾವೆಲ್ಲ ಅಳವಡಿಸಿಕೊಂಡು ಅವರ ಮಾರ್ಗದರ್ಶನದಲ್ಲಿ ನಡೆಯಬೇಕೆಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.
   ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರೂ ಯುವ ಕೇಂದ್ರ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಅಂಗವಾಗಿ ಇಂದು ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಯುವ ದಿನ ಹಾಗೂ ಯುವ ಸಪ್ತಾಹ ಕಾಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
     ವಿವೇಕಾನಂದರು ಅಮೆರಿಕಾದ ಚಿಕಾಗೋ ನಲ್ಲಿ ನಡೆದ ವಿಶ್ವ ಧಾರ್ಮಿಕ ಸಭೆಯಲ್ಲಿ ಮಾಡಿದ ಭಾಷಣವನ್ನು ಎಲ್ಲ ವಿದ್ಯಾರ್ಥಿಗಳು ಕೇಳಬೇಕು. ಅದ್ಭುತವಾದ ಭಾಷಣ ಅದಾಗಿದ್ದು ಎಲ್ಲರೂ ಕೇಳಬೇಕು. ವಿವೇಕಾನಂದರ ಚಿಂತನೆಗಳು, ಮೌಲ್ಯಗಳ ಅಧ್ಯಯನ ಮಾಡಿ ಅವುಗಳನ್ನು ಅಳವಡಿಸಿಕೊಳ್ಳಬೇಕು.
    ವಿದ್ಯಾರ್ಥಿಗಳು ಯಾವುದೇ ದುಶ್ಚಟಗಳು, ಬೇಡದ ಅಭ್ಯಾಸಗಳಿಗೆ ಬಲಿಯಾಗದೇ ಗುರುಗಳು, ಪೋಷಕರ ಮಾತನ್ನು ಕೇಳಿ, ಅವರ ಮಾರ್ಗದರ್ಶನದಲ್ಲಿ ಮುಂದೆ ಸಾಗಬೇಕು ಹಾಗೂ ಸಮಾಜಕ್ಕೆ, ದೇಶಕ್ಕೆ ಒಳ್ಳೆಯ ಹೆಸರು ತರುತ್ತೇನೆಂದು ಇಂದೇ ಸಂಕಲ್ಪ ಮಾಡಬೇಕು ಎಂದರು.
   ಅತಿ ಹೆಚ್ಚು ಯುವಜನತೆಯನ್ನು ಹೊಂದಿದ ಯುವಕರ ದೇಶ ನಮ್ಮದು. ಹಾಗೂ ಜನಸಂಖ್ಯೆಯಲ್ಲಿ ಎರಡನೇ ದೊಡ್ಡ ರಾಷ್ಟ್ರ. ಇಂತಹ ಯುವ ರಾಷ್ಟ್ರದಲ್ಲಿ ಯುವಜನತೆಯ ಜವಾಬ್ದಾರಿ ಹೆಚ್ಚಿದೆ. ಸಾಕ್ಷರತೆ ಹೆಚ್ಚುತ್ತಿದೆ. ಇನ್ನೂ ಹೆಚ್ಚಬೇಕು ಮತ್ತು ಶಿಕ್ಷಣದೊಂದಿಗೆ ಕೌಶಲ್ಯವನ್ನು ಕೂಡ ಅಭಿವೃದ್ದಿಪಡಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ರೂಪಿಸಿ, ಕೌಶಲ್ಯ ಅಭಿವೃದ್ದಿಪಡಿಸುತ್ತಿದ್ದು, ಇದರ ಸದುಪಯೋಗವನ್ನು ಪಡೆಯಬೇಕೆಂದರು.
    ಅಪರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅನಿಲ್‍ಕುಮಾರ್ ಭೂಮರೆಡ್ಡಿ ಮಾತನಾಡಿ, ಯಾವುದೇ ಸಮಸ್ಯೆಗೆ ಪರಿಹಾರ ಅದನ್ನು ಎದುರಿಸಿ ನಿಲ್ಲುವುದು, ಪಲಾಯನವಾದವಲ್ಲ. ಎದುರಿಸುವ ಎದೆಗಾರಿಕೆ ನಮ್ಮಲ್ಲಿ ಇರಬೇಕೆಂದು ವಿವೇಕಾನಂದರು ತಿಳಿಸಿದ್ದು, ಅವರ ದಾರಿಯಲ್ಲಿ ನಾವು ನಡೆಯಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
     ವ್ಯಕ್ತಿತ್ವ ವಿಕಸನ ಉಪನ್ಯಾಸಕರಾದ ರಮೇಶ್ ಉಮ್ರಾಣಿ ಮಾತನಾಡಿ, ವಿವೇಕಾನಂದರ ಪ್ರೇರಣೆ ಪಡೆದು ಹತ್ತು ಹಲವಾರು ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹನೀಯರನ್ನು ಕಾಣುತ್ತಿದ್ದೇವೆ. ವಿವೇಕಾನಂದರ ಪ್ರಕಾರ ಭಾರತದ ನೆಲ ಪುಣ್ಯಭೂಮಿ. ತಂದೆ, ತಾಯಿ ಗುರುಗಳೇ ಜೀವಂತ ದೇವರುಗಳು. 
    ಶಿಕ್ಷಣ ಅತಿ ಶಕ್ತಿಯುತವಾದದ್ದು, ಶಿಕ್ಷಣ ಕೇವಲ ಸಾಕ್ಷರತೆ ಮತ್ತು ಕೆಲಸ ಪಡೆಯಲು ಅಲ್ಲ, ಅದೊಂದು ಸಬಲೀಕರಣದ ಅಸ್ತ್ರ ಹಾಗೂ ಅದೊಂದು ಜವಾಬ್ದಾರಿ. ಪ್ರತಿಯೊಬ್ಬ ಮನುಷ್ಯನು ಆತ್ಮಾವಲೋಕನ ಮಾಡಿಕೊಂಡು ಬದುಕಿದಲ್ಲಿ ಸ್ವಯಂ ನಿಯಂತ್ರಣ, ಸ್ವಸ್ಥ ಸಮಾಜ ಸಾಧ್ಯವಾಗುತ್ತದೆ. ನಿನ್ನೊಳಗೆ ನಿಜವಾದ ಅರ್ಹತೆ, ಉತ್ಸಾಹ ಇದ್ದರೆ ಅದನ್ನು ತಡೆಹಿಡಿಯಲು ಯಾರಿಂದಲೂ ಸಾಧ್ಯವಿಲ್ಲ. ವಿದ್ಯಾರ್ಥಿ ಜೀವನವನ್ನು ಸದುಪಯೋಗಪಡಿಸಿಕೊಂಡಾಗ ಸಾರ್ಥಕ ಜೀವನ ಸಾಧ್ಯ ಎಂದಿದ್ದಾರೆ ವಿವೇಕಾನಂದರು. ವಿವೇಕಾನಂದರು ಯುವಜನತೆಯ ಸ್ಫೂರ್ತಿ. ಅವರ ಬಗ್ಗೆ ಎಲ್ಲರೂ ಅಧ್ಯಯನ ಮಾಡಬೇಕು ಎಂದು ಅವರು ಆಶಿಸಿದರು.
     ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ವಿನಯಾನಂದ ಸರಸ್ವತಿ ಸ್ವಾಮೀಜಿಯವರು ಸ್ವಾಮಿ ವಿವೇಕಾನಂದರ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಮಹಾನಗರಪಾಲಿಕೆ ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್, ಎನ್‍ಇಎಸ್ ನ ಅಶ್ವಥ್ ನಾರಾಯಣ್ ಇದ್ದರು.
      ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥಸ್ವಾಮಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕುವೆಂಪು ವಿವಿ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ನಾಗರಾಜ ಪರಿಸರ ಕಾರ್ಯಕ್ರಮ ನಿರೂಪಿಸಿದರು.
(ಫೋಟೊ ಇದೆ)

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.