ಉಡುಪಿಯಲ್ಲಿ ಎಂಐಒ ಕ್ಯಾನ್ಸರ್ ಡೇ ಕೇರ್ ಸೆಂಟರ್ ಪ್ರಾರಂಭ

ಮಂಗಳೂರಿನಲ್ಲಿ ಕಳೆದ 12 ವರ್ಷಗಳಿಂದ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಿ ಜಪ್ರಿಯಗೊಂಡಿರುವ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಅಂಕಾಲಜಿಯ ಕ್ಯಾನ್ಸರ್ ಡೇ ಕೇರ್ ಸೆಂಟರ್, ಉಡುಪಿಯಲ್ಲಿ ಕಾರ್ಯಾರಂಭ ಮಾಡಿದೆ ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ಡಾ.ಸುರೇಶ್‌ ರಾವ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಉಡುಪಿ-ಮಣಿಪಾಲ ರಾಷ್ಟ್ರೀಯ ಹೆದ್ದಾರಿಯ ಕುಂಜಿಬೆಟ್ಟು ಬ್ಯುಸಿನೆಸ್ ಬೇ ಸೆಂಟರ್ ನಲ್ಲಿ ಎಂಐಒ ಕ್ಯಾನ್ಸರ್ ಡೇ ಕೇರ್ ಸೆಂಟರ್ ಕಾರ್ಯಾಚರಿಸುತ್ತಿದೆ. 

ಕೇವಲ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ಮೀಸಲಾದ ಈ ಆಸ್ಪತ್ರೆ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ ಮತ್ತು ಹಾವೆರಿ ಜಿಲ್ಲೆಗಳ ರೋಗಿಗಳಿಗೆ ಅನುಕೂಲವಾಗಲಿದೆ. ಎಂಐಒ ಮಂಗಳೂರು ಕೇಂದ್ರದ ಎಲ್ಲಾ ಸೇವೆಗಳು ಇಲ್ಲೂ ಲಭ್ಯವಿರಲಿದೆ. ಅಲ್ಲಿನ ಹಿರಿಯ ಕ್ಯಾನ್ಸರ್ ತಜ್ಞವೈದ್ಯರು ರೋಗಿಗಳ ಸಂದರ್ಶನಕ್ಕೆ ಪ್ರತಿದಿನ ಇಲ್ಲೂ ಲಭ್ಯರಿರುವರು. ಅಲ್ಲದೇ ರೋಗಿಯ ಕುಟುಂಬದವರು ಇಲ್ಲಿಯೇ ವೈದ್ಯರನ್ನು ಭೇಟಿಯಾಗಿ ಸಮಾಲೋಚನೆ ನಡೆಸಬಹುದು ಎಂದು ತಿಳಿಸಿರುತ್ತಾರೆ.

20 ಹಾಸಿಗೆಯುಳ್ಳ ಸುಸಜ್ಜಿತ ಡೇ ಕೇರ್ ಸೆಂಟರ್ ಇದಾಗಿದ್ದು, ಇಲ್ಲಿ ಸುಸಜ್ಜಿತ ಪ್ರಯೋಗಾಲಯ, ನುರಿತ ಶುಶ್ರೂಷಕರು, ಸಿಬ್ಬಂದಿ ವರ್ಗವಿದ್ದು, ಅಕ್ಕರೆಯ ಆರೈಕೆಯೊಂದಿಗೆ ಆಧುನಿಕ ಚಿಕಿತ್ಸಾ ಲಭ್ಯವಿದೆ. ಎಂಐಒ ಉಡುಪಿ ಡೇ ಕೇರ್ ನಲ್ಲಿ ಪ್ರಮುಖ ಕ್ಯಾನ್ಸರ್ ಚಿಕಿತ್ಸೆಗಳಾದ ಕೀಮೋಥೆರಪಿ, ಇಮ್ಯೂನೋಥೆರಪಿ, ಟಾರ್ಗೆಟೆಡ್ ಥೆರಪಿ ಸೇರಿದಂತೆ ಶೇ.85ರಷ್ಟು ಚಿಕಿತ್ಸೆಗಳನ್ನು ಒಳರೋಗಿಯಾಗಿ ದಾಖಲಾಗದೇ ಡೇ ಕೇರ್ ನಲ್ಲಿ ಪಡೆಯಬಹುದು.
ಬಡ ಕುಟುಂಬದ ಕ್ಯಾನ್ಸರ್ ರೋಗಿಗಳು ಇಲ್ಲೂ ಸರಕಾರದ ಯೋಜನೆಗಳಡಿ ಉಚಿತ ಅಥವಾ ಅತೀ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ಪಡೆಯಬಹುದು. ಮಂಗಳೂರು ಕೇಂದ್ರದಲ್ಲಿ ಶೇ.70ರಷ್ಟು ಬಿಪಿಎಲ್ ಕುಟುಂಬದ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಅಲ್ಲದೇ ಎಲ್ಲಾ ಬಗೆಯ ಕಾರ್ಪೊರೇಟ್ ಹಾಗೂ ಖಾಸಗಿ ಆರೋಗ್ಯ ವಿಮೆಗಳಡಿ ಚಿಕಿತ್ಸೆ ಪಡೆಯುವ ಅನುಕೂಲ ಕಲ್ಪಿಸಲಾಗಿದೆ. ಹೀಗಾಗಿ ಸಾಮಾನ್ಯ ಜನರೂ ಕೈಗೆಟಕುವ ದರದಲ್ಲಿ ಅತ್ಯುತ್ತಮ ಚಿಕಿತ್ಸೆ ಪಡೆಯಲು ಸಾಧ್ಯವಾಗಲಿದೆ ಎಂದು ಡಾ.ಸುರೇಶ್ ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.