ವಿಶ್ವ ರಕ್ತದಾನಿಗಳ ದಿನಾಚರಣೆ *ಜೀವ ಉಳಿಸುವ ಸ್ವಯಂ ಪ್ರೇರಿತ ರಕ್ತದಾನಕ್ಕೆ ಕೈ ಜೋಡಿಸೋಣ*

ಜಗತ್ತಿನ ಅತಿ ದೊಡ್ಡ ಸಂಶೋಧನೆಯೆಂದರೆ ಒಬ್ಬ ಮನುಷ್ಯನ ರಕ್ತವನ್ನು ಇನ್ನೊಬ್ಬನ ಜೀವ ಉಳಿಸಲು ಉಪಯೋಗಿಸುವುದು. ಇದರಿಂದ ಹಲವಾರು ಜನರು ಸಾವಿನಿಂದ ಪಾರಾಗಿದ್ದಾರೆ. ತನ್ನ ರಕ್ತವನ್ನು ಇನ್ನೊಬ್ಬರ ಜೀವ ಉಳಿಸಲು ಪ್ರತಿಫಲಾಪೇಕ್ಷೆಯಿಲ್ಲದೆ ಸ್ವಯಂ ಪ್ರೇರಣೆಯಿಂದ ನೀಡುವುದು ‘ರಕ್ತದಾನ’
    ಜೂನ್ 14 ನ್ನು ವಿಶ್ವದಾದ್ಯಂತ ರಕ್ತದಾನಿಗಳ ದಿನಾಚರಣೆ ಎಂದು ಆಚರಿಸಲಾಗುತ್ತದೆ. ಪ್ರಥಮ ಬಾರಿಗೆ ರಕ್ತದ ಗುಂಪು ಕಂಡು ಹಿಡಿದ ಕಾರ್ಲ್ ಲ್ಯಾಂಡ್‍ಸ್ಟೇನರ್ ಎಂಬ ವಿಜ್ಞಾನಿಯ ಹುಟ್ಟುಹಬ್ಬದ ನೆನಪಿಗಾಗಿ 2004 ರಿಂದ ವಿಶ್ವ ಆರೋಗ್ಯ ಸಂಸ್ಥೆ ಈ ದಿನಾಚರಣೆ ಜಾರಿಗೆ ತಂದಿದೆ. 
    ಪ್ರಸಕ್ತ ಸಾಲಿನಲ್ಲಿ ‘ರಕ್ತದಾನ ಮಾಡುವುದು ಒಗ್ಗಟ್ಟಿನ ಪ್ರಕ್ರಿಯೆ, ಈ ಪ್ರಯತ್ನಕ್ಕೆ ಕೈ ಜೋಡಿಸಿ ಜೀವ ಉಳಿಸೋಣ’ ಎಂ ಘೋಷವಾಕ್ಯದೊಂದಿಗೆ ವಿಶ್ವ ಸ್ವಯಂ ಪ್ರೇರಿತ ರಕ್ತದಾನಿಗಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
     ರಕ್ತಕ್ಕೆ ವರ್ಷವಿಡೀ ನಿರಂತರವಾಗಿ ಬೇಡಿಕೆ ಇರುತ್ತದೆ. ಏಕೆಂದರೆ ಅಪಘಾತಗಳು, ತುರ್ತು ಚಿಕಿತ್ಸೆ ಸಂದರ್ಭಗಳು ಬರುತ್ತಲೇ ಇರುತ್ತವೆ. ಜೊತೆಯಲ್ಲಿ ಕ್ಯಾನ್ಸರ್ ರೋಗಿಗಳು, ಗರ್ಭಿಣಿ ಸ್ತ್ರೀಯರು, ತಲಸ್ಸೀಮಿಯ, ಹಿಮೊಫೀಲಿಯ ಮುಂತಾದ ರೋಗಿಗಳು ರಕ್ತದಾನಿಗಳನ್ನೇ ಅವಲಂಬಿಸಿರುತ್ತಾರೆ.
    ಒಮ್ಮೆ ದಾನಿಗಳಿಂದ ಶೇಖರಿಸಿದ ರಕ್ತ 35 ದಿನಗಳವರೆಗೆ ಮಾತ್ರ ತನ್ನ ಶಕ್ತಿಯನ್ನು ಉಳಿಸಿಕೊಂಡಿರುತ್ತದೆ. 35 ದಿನಗಳ ನಂತರ ಅದು ಉಪಯೋಗಕ್ಕೆ ಬರುವುದಿಲ್ಲ. ಆದ್ದರಿಂದ 18 ವಯಸ್ಸಿನಿಂದ 60 ವರ್ಷದ ಒಳಗಿನ ಪ್ರತಿಯೊಬ್ಬ ಆರೋಗ್ಯವಂತರು ಆಗಾಗ ರಕ್ತದಾನ ಮಾಡಿದಲ್ಲಿ ಮಾತ್ರ ನಿರಂತರವಾಗಿ ಅವಶ್ಯಕತೆ ಇರುವವರಿಗೆ ರಕ್ತ ನೀಡಿ ಜೀವ ಉಳಿಸಲು ಸಾಧ್ಯವಾಗುತ್ತದೆ. ರಕ್ತವನ್ನು ನೀಡಿ ಇನ್ನೊಬ್ಬರ ಜೀವವನ್ನು ಉಳಿಸುವುದರೊಂದಿಗೆ ತಮ್ಮ ದೇಹದಲ್ಲಿ ಇರುವ ರಕ್ತದ ಗುಂಪು ಯಾವುದು ಎಂದು ತಿಳಿದುಕೊಳ್ಳುವುದು ಅಷ್ಟೆ ಮುಖ್ಯವಾಗಿರುತ್ತದೆ.
    ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 09 ರಕ್ತನಿಧಿ ಕೇಂದ್ರಗಳು(1 ಸರ್ಕಾರಿ ರಕ್ತನಿಧಿ ಕೇಂದ್ರ, 8 ಖಾಸಗಿ ರಕ್ತನಿಧಿಕೇಂದ್ರಗಳು) ಹಾಗೂ ಸಾರ್ವಜನಿಕ ಆಸ್ಪತ್ರೆಗಳಲ್ಲಿ 6 ರಕ್ತ ಸಂರಕ್ಷಣಾ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. 2021-22 ನೇ ಸಾಲಿನಲ್ಲಿ 31553 ರಕ್ತದ ಯುನಿಟ್‍ಗಳನ್ನು ಸಂಗ್ರಹಿಸಲಾಗಿದ್ದು, ಅದರಲ್ಲಿ 18853 ಯುನಿಟ್‍ಗಳನ್ನು ರಕ್ತ ನಿಧಿ ಕೇಂದ್ರಗಳಲ್ಲಿ ಸ್ವಯಂ ಪ್ರೇರಿತರಾಗಿ ನೀಡಿದ್ದು, 290 ಶಿಬಿರಗಳಿಂದ 10333 ಯುನಿಟ್‍ಗಳನ್ನು ಹಾಗೂ 2367 ಯುನಿಟ್‍ಗಳನ್ನು ಬದಲಿ ರಕ್ತದಾನದ ಮೂಲಕ ಸಂಗ್ರಹಿಸಲಾಗಿರುತ್ತದೆ. ಗ್ರಾ.ಪಂ ಗಳು, ಸಂಘ ಸಂಸ್ಥೆಗಳು, ರೆಡ್ ರಿಬ್ಬನ್ ಕ್ಲಬ್, ಎನ್‍ಎಸ್‍ಎಸ್ ಘಟಕಗಳು, ನೌಕರರ ಸಂಘಗಳು ಹಾಗೂ ಗ್ರಾಮೀಣ ಪ್ರದೇಶಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಟ್ಟದಲ್ಲಿಯೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. 

ರಕ್ತದ ಮಹತ್ವ : ರಕ್ತಕ್ಕೆ ಪರ್ಯಾಯ ವಸ್ತುವಿಲ್ಲ. ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಮನುಷ್ಯರ ದಾನದಿಂದ ಮಾತ್ರ ಇದನ್ನು ಪಡೆಯಬಹುದು. ರಕ್ತದಾನ ಮಾಡಿದ ಕೆಲವೇ ಕ್ಷಣದಲ್ಲಿ ದಾನಿಯ ದೇಹದಲ್ಲಿ ರಕ್ತದ ಉತ್ಪತ್ತಿ ಪ್ರಾರಂಭವಾಗಿ 24 ಗಂಟೆ ಒಳಗಾಗಿ ದಾನ ಮಾಡಿದ ಪ್ರಮಾಣದಲ್ಲಿ ರಕ್ತ ದೇಹದಲ್ಲಿ ಪುನರುತ್ಪತ್ತಿಯಾಗುತ್ತದೆ. ರಕ್ತದಾನ ಮಾಡಲು ಮತ್ತು ಸುಧಾರಿಸಿಕೊಳ್ಳಲು ಒಟ್ಟು ಸೇರಿ 20 ನಿಮಿಷಕ್ಕೂ ಹೆಚ್ಚಿನ ಸಮಯ ಬೇಕಾಗಿಲ್ಲ.

ಯಾರು ರಕ್ತದಾನ ಮಾಡಬಹುದು: ಹೆಣ್ಣು ಗಂಡು ಬೇಧವಿಲ್ಲದೆ 18 ರಿಂದ 60 ವರ್ಷದ ಒಳಗಿನ ಎಲ್ಲಾ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು. ಪುರುಷರು 3 ತಿಂಗಳಿಗೊಮ್ಮೆ, ಮಹಿಳೆಯರು 4 ತಿಂಗಳಿಗೊಮ್ಮ ರಕ್ತದಾನ ಮಾಡಬಹುದು, ದಾನಿಯ ದೇಹದ ತೂಕ 45 ಕೆ.ಜಿ.ಗಿಂತ ಹೆಚ್ಚಿಗೆ ಇರಬೇಕು ಹಾಗೂ ಹಿಮೋಗ್ಲೊಬಿನ್ ಅಂಶ 12.5 ಗ್ರಾಂ ಗಿಂತ ಹೆಚ್ಚಿರಬೇಕು.
      ಅನಾರೋಗ್ಯಪೀಡಿತರು, ಮಾದಕ ವ್ಯಸನಿಗಳು, ಗರ್ಭಿಣಿಯರು, ಎದೆಹಾಲುಣಿಸುವವರು, ಲಸಿಕೆ ಪಡೆದ 4 ವಾರದೊಳಗಿನವರು, ಮಲೇರಿಯಾ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವವರು, ದೊಡ್ಡ ಶಸ್ತ್ರಚಿಕಿತ್ಸೆಗೆ ಒಳಗಾದ 06 ತಿಂಗಳ ಒಳಗಿನವರು, ಕಾಮಾಲೆ, ಹೆಚ್‍ಐವಿ, ಕ್ಯಾನ್ಸರ್, ಹೃದಯದ ಕಾಯಿಲೆ, ಇತರೆ ರೋಗಗಳಿಗೀಡಾದವರು ರಕ್ತದಾನ ಮಾಡಬಾರದು.
         ಮಲೇರಿಯಾ, ಲೈಂಗಿಕ ಸಂಪಕ ರೋಗಗಳು, ಹೆಪಟೈಟಿಸ್ ಬಿ, ಸಿ ಸೋಂಕಿನಿಂದಾಗುವ ಕಾಮಾಲೆ, ಹೆಚ್‍ಐವಿ ಸೋಂಕು ಮತ್ತು ಏಡ್ಸ್ ಬಗ್ಗೆ ರಕ್ತವನ್ನು ಯವುದೇ ವ್ಯಕ್ತಿಗೆ ನೀಡುವ ಮೊದಲು ಪಡೆದ ರಕ್ತವನ್ನು ಈ ರೋಗಗಳಿಂದ ಮುಕ್ತವಾಗಿದೆ ಎಂದು ಖಾತ್ರಿಪಡಿಸಿಕೊಳ್ಳಲು ಪರೀಕ್ಷೆಗೆ ಒಳಪಡಿಸಲಾಗುತ್ತದೆ.
    ರಕ್ತದಾನ ಮಾಡುವುದರಿಂದ ದಾನಿಯ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಲು ಪ್ರಚೋದನೆಯಾಗುತ್ತದೆ. ಕಾರ್ಯತತ್ಪರತೆ, ಜ್ಞಾಪಕಶಕ್ತಿ ವೃದ್ದಿಯಾಗುತ್ತದೆ. ರಕ್ತದಲ್ಲಿ ಕೊಬ್ಬಿನಾಂಶ ಕಡಿಮೆ ಮಾಡಲು ಸಹಾಯವಾಗಿದ್ದು, ಹೃದಯಾಘಾತವನ್ನು ಶೇ.80 ಕ್ಕಿಂತಲೂ ಹೆಚ್ಚು ತಡೆಯಲು ಸಹಕಾರಿ ಹಾಗೂ ರಕ್ತದ ಒತ್ತಡ ಇತರೆ ಕೆಲ ರೋಗಗಳನ್ನು ತಡೆಗಟ್ಟಲು ಸಹಕಾರಿ.

• ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕದ ಪ್ರಕಟಣೆ

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.