*ವಿಮಾ ಕ್ಲೇಮು ಮತ್ತು ಸೇವಾನ್ಯೂನ್ಯತೆಗೆ ಪರಿಹಾರ ನೀಡುವಂತೆ ತೀರ್ಪು*

ಶಿವಮೊಗ್ಗ ಜೂನ್ 03; ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮುಂದೆ ಎಲ್.ರಮ್ಯ ಇವರು ತಮ್ಮ ದಿವಂಗತ ಪತಿಗೆ ವಿಮಾ ಕಂಪನಿಯವರು ಕ್ಲೇಮನ್ನು ನಿರಾಕರಿಸಿರುವುದು ಸೇವಾನ್ಯೂನ್ಯತೆ ಎಂದು ಆರೋಪಿಸಿ ಸೂಕ್ತ ಪರಿಹಾರ ಕೋರಿ ಸಲ್ಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಆಯೋಗವು ಅರ್ಜಿದಾರರಿಗೆ ಸಲ್ಲಬೇಕಾದ ವಿಮಾ ಕ್ಲೇಮು ಮತ್ತು ಸೇವಾನ್ಯೂನ್ಯತೆಗೆ ಪರಿಹಾರ ನೀಡಬೇಕೆಂದು ಆದೇಶಿಸಿ ತೀರ್ಪು ನೀಡಿದೆ.
    ಅರ್ಜಿದಾರರಾದ ಎಲ್.ರಮ್ಯ ತಮ್ಮ ಪತಿ ದಿ|| ಎನ್.ವೆಂಕಟೇಶ್ ಇವರು ಶಿವಮೊಗ್ಗ ಮುತ್ತೂಟ್ ಕ್ಯಾಪಿಟಲ್ ಸರ್ವಿಸಸ್ ಲಿ.ನಲ್ಲಿ ಉದ್ಯೋಗಿಯಾಗಿದ್ದು ಉದ್ಯೋಗದಾತ ಕಂಪನಿಯವರು ಭಾರತಿ ಎಎಕ್ಸ್‍ಎ ಜನರಲ್ ಇನ್ಶೂರೆನ್ಸ್ ಕಂ.ಲಿ ಹೈದರಾಬಾದ್ ಇವರಿಂದ ತಮ್ಮಲ್ಲಿ ಸೇವೆ ಸಲ್ಲಿಸುತ್ತಿರುವ ಉದ್ಯೋಗಿಗಳಿಗೆ ಗುಂಪು ವಿಮೆ ಖರೀದಿಸಿರುತ್ತಾರೆ. ಅರ್ಜಿದಾರರ ಪತಿ ದಿ: 19-05-2015 ರಂದು ಮರಣ ಹೊಂದಿದ್ದು, ಸದರಿ ಇನ್ಶೂರೆನ್ಸ್ ಕಂಪನಿಯವರು ತನಿಖಾಧಿಕಾರಿ ವರದಿಯ ಆಧಾರದ ಮೇಲೆ ಎನ್.ವೆಂಕಟೇಶ್ ಇವರು ದೊಡ್ಡಪೇಟೆ ಪೊಲೀಸ್ ಠಾಣಾ ಚಾರ್ಜ್‍ಶೀಟ್ ಪ್ರಕಾರ 2011 ರಲ್ಲಿ ಹತ್ಯೆಗೊಂಡ ತುಳಸೀರಾಮ್ ಪ್ರಕರಣದಲ್ಲಿ ಆಪಾದಿತರಾಗಿದ್ದು ಸದರಿ ಹತ್ಯೆಯ ಪರಿಣಾಮದಿಂದ ತುಳಸೀರಾಮ್ ಕುಟುಂಬಸ್ಥರು ವೆಂಕಟೇಶ್ ಅವರನ್ನು ಕೊಲೆ ಮಾಡಿರುತ್ತಾರೆಂದು ಶಂಕಿಸಿ ಬರೆದಂತಹ ವಾರ್ತಾ ವರದಿಗಳ ಆಧಾರದ ಮೇಲೆ ಅವರ ವಿಮಾ ಕ್ಲೇಮು ನೀಡಲು ನಿರಾಕರಿಸಲಾಗಿತ್ತು.
    ಜಿಲ್ಲಾ ಆಯೋಗವು ಅರ್ಜಿದಾರರು ಹಾಜರುಪಡಿಸಿದ ದಾಖಲೆಗಳನ್ನು ಪರಿಶೀಲಿಸಿ, ವೆಂಟಕೇಶ್ ಶಿವಮೊಗ್ಗ 1ನೇ ತ್ವರಿತಗತಿ ನ್ಯಾಯಾಲಯದ ಆದೇಶದ ಮೇರೆಗೆ ನಿರಪರಾಧಿ ಎಂದು ಬಿಡುಗಡೆಗೊಂಡಿರುವುದನ್ನು ಗಮನಿಸಿ, ವಿಮಾ ಕಂಪೆನಿಯವರು ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್.ವೆಂಕಟೇಶ್ ಮೇಲೆ ಆರೋಪವಿತ್ತು ಎಂಬ ಆಧಾರದ ಮೇಲೆ ಮರಣೋತ್ತರ ವಿಮಾ ಕ್ಲೇಮು ನೀಡುವುದಕ್ಕೆ ನಿರಾಕರಿಸುವುದು ಸೂಕ್ತವೆನಿಸುವುದಿಲ್ಲ ಎಂದು ತೀರ್ಮಾನಿಸಿ, ವಿಮಾ ಕಂಪನಿಯವರಿಗೆ 2ನೇ ಎದುರುದಾರರಾದ ಉದ್ಯೋಗದಾರರಿಂದ ಸೂಕ್ತ ದಾಖಲೆಗಳನ್ನು ತರಿಸಿಕೊಂಡು ಅರ್ಜಿದಾರರಿಗೆ ಅವರ ದಿವಂಗತ ಪತಿಗೆ ಸಲ್ಲಬೇಕಾಗಿದ್ದ ರೂ.5,00,000/- ಗಳ ವಿಮಾ ಕ್ಲೇಮನ್ನು/ಪರಿಹಾರವನ್ನು ಸದರಿಯವರ ಮರಣದ ದಿನಾಂಕದಿಂದ ಸಂದಾಯವಾಗುವವರೆಗೆ ವಾರ್ಷಿಕ ಶೇ.9 ರಂತೆ ಬಡ್ಡಿ ಸಮೇತ ಪಾವತಿಸತಕ್ಕದ್ದು ಮತ್ತು ಸೇವಾನ್ಯೂನ್ಯತೆಗೆ ಪರಿಹಾರವಾಗಿ ರೂ.10,000 ಗಳನ್ನು ಆದೇಶವಾದ 45 ದಿನಗಳ ಒಳಗಾಗಿ ನೀಡತಕ್ಕದ್ದೆಂದು ಜಿಲ್ಲಾ ಆಯೋಗದ ಪ್ರಭಾರ ಅಧ್ಯಕ್ಷೆ ಸವಿತಾ.ಬಿ.ಪಟ್ಟಣಶೆಟ್ಟಿ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಇವರ ಪೀಠ ತೀರ್ಮಾನ ನೀಡಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.