ಸುಲಿಗೆ ಪ್ರಕರಣ ಮೂವರು ಆರೋಪಿಗಳ ಬಂಧನ ಹಾಗೂ 15ಲಕ್ಷ ರೂ. ನಗದು ಕೃತ್ಯಕ್ಕೆ ಬಳಸಿದ ಕಾರು ವಶ

 ಶಿವಮೊಗ್ಗ; ದಿಃ-24-11-2020 ರಂದು ಪಿರ್ಯಾದಿ ನಫೀಸ್ ಆಲಂ, 35 ವರ್ಷ ಮತ್ತು ಇನ್ನೋರ್ವ ವ್ಯಕ್ತಿಯು ಕೊಲ್ಲಾಪುರದಿಂದ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ರೂ 15 ಲಕ್ಷ ರೂ ನಗದನ್ನು ಇಟ್ಟುಕೊಂಡು ಆನವಟ್ಟಿ ಮಾರ್ಗವಾಗಿ ಸಾಗರದ ಕಡೆಗೆ ಬರುತ್ತಿರುವಾಗ, ರಾತ್ರಿ ಸುಮಾರು 10-30 ಗಂಟೆಗೆ ಯಾರೋ ದುಷ್ಕರ್ಮಿಗಳು ಕಾರಿನಲ್ಲಿ ಇವರನ್ನು ಹಿಂಬಾಲಿಸಿಕೊಂಡು ಬಂದು, ಆನವಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಆನವಟ್ಟಿ - ಸೊರಬ ಮುಖ್ಯ ರಸ್ತೆಯ ಕೊರಕೋಡು ಕ್ರಾಸ್ ನ ಹತ್ತಿರ ಕಾರನ್ನು ಅಡ್ಡಗಟ್ಟಿ, ಇವರಿಗೆ ಹೆದರಿಸಿ ಈ ಹದಿನೈದು ಲಕ್ಷ ನಗದು ಮತ್ತು ಸ್ವಿಫ್ಟ್ ಡಿಸೈರ್ ಕಾರನ್ನು ಬಲವಂತವಾಗಿ ತೆಗೆದುಕೊಂಡು ಹೋಗಿರುವ ಕುರಿತು ಪ್ರಕರಣ ದಾಖಲಾಗಿತ್ತು. 

ಪ್ರಕರಣದ ತನಿಖೆ ಮುಂದುವರೆಸಿ, ಆರೋಪಿತರ ಪತ್ತೆ ಬಗ್ಗೆ ಶ್ರೀನಿವಾಸಲು, ಎ.ಎಸ್.ಪಿ ಶಿಕಾರಿಪುರ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ, ಮರುಳಸಿದ್ದಪ್ಪ  ಸಿಪಿಐ, ಸೊರಬ ವೃತ್ತ ಹಾಗೂ ಗುರುರಾಜ್ ಮೈಲಾರ್, ಸಿಪಿಐ, ಶಿಕಾರಿಪುರ ವೃತ್ತ ರವರ ನೇತೃತ್ವದ, ಪ್ರವೀಣ್ ಕುಮಾರ್, ಪಿಎಸ್ಐ ಆನವಟ್ಟಿ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳಾದ ಸಿ.ಹೆಚ್.ಸಿ ಗಿರೀಶ್, ತಿರುಕಪ್ಪ, ಮೂರ್ತಿ ಹಾಗೂ ಸಿಪಿಸಿ ರವರಾದ ನಾಗರಾಜ್, ಟೀಕಪ್ಪ,ಚಂದ್ರಾನಾಯ್ಕ್, ವರದರಾಜ್, ಜಗದೀಶ್, ಬಸಂತಪ್ಪ ಹಾಗೂ  ಎಹೆಚ್.ಸಿ  ಬಸವರಾಜ್, ಮಲ್ಲನಗೌಡ, ಕೃಷ್ಣ ಮತ್ತು ಶಿವಮೊಗ್ಗ ಜಿಲ್ಲಾ ಪೊಲೀಸ್ ಕಛೇರಿಯ ತಾಂತ್ರಿಕ ವಿಭಾಗದ ಪೊಲೀಸ್ ಸಿಬ್ಬಂದಿಗಳಾದ ಗುರುರಾಜ್, ಇಂದ್ರೇಶ್, ಮತ್ತು ವಿಜಯ್ ಕುಮಾರ್ ರವರನ್ನೊಳಗೊಂಡ ತಂಡವು ಕಾರ್ಯಾಚರಣೆ ನಡೆಸಿ,

ಆರೋಪಿಗಳಾದ ಕನ್ನಪ್ಪ (43)ವಾಸ ಸಾಗರ ಟೌನ್, ವಿಶ್ವನಾಥ @  ವಿಶ್ವ (32) ವಾಸ ಸಾಗರ ಟೌನ್, ನಫೀಸ್ ಆಲಂ (35)  ವಾಸ ಸಾಗರ ಟೌನ್ ರವರನ್ನು  ವಶಕ್ಕೆ ಪಡೆದು,  ಆರೋಪಿಗಳಿಂದ
ರೂ 7.50 ಲಕ್ಷ ರೂ ನಗದು, 01 ಸ್ವಿಫ್ಟ್ ಡಿಸೈರ್ ಕಾರು ಹಾಗೂ ಕಾರಿನಲ್ಲಿದ್ದ ರೂ 7.50 ಲಕ್ಷ ರೂ. ನಗದು ಮತ್ತು ಕೃತ್ಯಕ್ಕೆ ಬಳಸಿದ ಹುಂಡೈ ವರ್ನ ಕಾರನ್ನು ವಶಪಡಿಸಿಕೊಳ್ಳಲಾಗಿದೆ. 

ಇದರಲ್ಲಿ ಸ್ವಿಫ್ಟ್ ಡಿಸೈರ್ ಕಾರು ಚಾಲಕನಾದ ನಫೀಸ್ ಆಲಂ (ಪ್ರಕರಣದ ಪಿರ್ಯಾದಿ) ಈತನೇ ಉಳಿದ ಇಬ್ಬರು ಆರೋಪಿಗಳಿಗೆ ಮಾಹಿತಿ ನೀಡಿದ್ದು, ಕೃತ್ಯದಲ್ಲಿ  ಸಹಾಯ ಮಾಡಿರುವುದು  ತಿಳಿದು ಬಂದಿರುತ್ತದೆ.

ಮೂವರು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರ್ ಪಡಿಸಿರುತ್ತದೆ ಎಂದು  ಕೆ.ಎಂ ಶಾಂತರಾಜು, ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ  ಅವರು ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.