*ನಗರದಲ್ಲಿ ವಾಹನ ನಿಲುಗಡೆ ನಿಷೇಧ ಹಾಗೂ ವಾಹನ ನಿಲುಗಡೆ ಆದೇಶ*

ಶಿವಮೊಗ್ಗ, ಸೆಪ್ಟಂಬರ್ 11:  ಶಿವಮೊಗ್ಗ ನಗರದ ಶಿವಮೂರ್ತಿ ಸರ್ಕಲ್ ಬಳಿ ಮೆಟ್ರೋ ಆಸ್ಪತ್ರೆ ಇದ್ದು ವಾಹನ ದಟ್ಟಣೆ ಹೆಚ್ಚಾಗಿ ಶಿವಮೂರ್ತಿ ಸರ್ಕಲ್‍ನಿಂದ ಹಾದು ಹೋಗುವ ಜಯನಗರ ಮುಖ್ಯ ರಸ್ತೆಯಲ್ಲಿ ಎಲ್ಲೆಂದರಲ್ಲಿ ನಿಲ್ಲಿಸಿ ಸುಗಮ ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತಿರುತ್ತಾರೆ ಅಲ್ಲದೇ ರಸ್ತೆಯಲ್ಲಿ ಸರ್ವೋದಯ ಶಾಲೆ ಇದ್ದು, ವಿದ್ಯಾರ್ಥಿಗಳ ಓಡಾಟ ಸಹ ಹೆಚ್ಚಾಗಿರುತ್ತದೆ ಮತ್ತು ನೆಹರೂ ಸ್ಟೇಡಿಯಂಗೆ ಹೋಗುವ ದ್ವಾರವೂ ಸಹ ಇರುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿರುವುದರಿಂದ ರಸ್ತೆಯಲ್ಲಿನ ವಾಹನ ಸಂಚಾರ ವ್ಯವಸ್ಥೆ ಸುಗಮಗೊಳಿಸುವ ನಿಟ್ಟಿನಲ್ಲಿ ಜಯನಗರ ಮುಖ್ಯ ರಸ್ತೆಯಲ್ಲಿ ಶಿವಮೂರ್ತಿ ಸರ್ಕಲ್‍ನಿಂದ ಡಿ.ಸಿ.ಕಾಂಪೌಂಡ್‍ವರೆಗೆ ಸುಗಮ ಸಂಚಾರ ದೃಷ್ಠಿಯಿಂದ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್. ರವರು ಅಧಿಸೂಚನೆ ಹೊರಡಿಸಿ ಕೆಳಕಂಡಂತೆ ಆದೇಶ ನೀಡಿರುತ್ತಾರೆ.
*ವಾಹನಗಳ ನಿಲುಗಡೆ ನಿಷೇಧಿತ ಸ್ಥಳ (ನೋ ಪಾರ್ಕಿಂಗ್)*; ಜಯನಗರ ಮುಖ್ಯ ರಸ್ತೆಯಲ್ಲಿ ಶಿವಮೂರ್ತಿ ಸರ್ಕಲ್‍ನಿಂದ ಡಿ.ಸಿ. ಕಾಂಪೌಂಡ್‍ವರೆಗೆ ಎಡಭಾಗ ಹಾಗೂ ಜಯನಗರ ಮುಖ್ಯರಸ್ತೆಯಲ್ಲಿ ಶಿವಮೂರ್ತಿ ಸರ್ಕಲ್‍ನಿಂದ ಜಯನಗರ 1ನೇ ಕ್ರಾಸ್ ಬಲಭಾಗ ಎಲ್ಲಾ ವಾಹನಗಳ ನಿಲುಗಡೆ ನಿಷೇದಿಸಲಾಗಿದೆ. 
*ವಾಹನಗಳ ನಿಲುಗಡೆ ಸ್ಥಳ (ಪಾರ್ಕಿಂಗ್)*: ಜಯನಗರ ಮುಖ್ಯ ರಸ್ತೆಯಲ್ಲಿ ಸಾರ್ವಜನಿಕ ಶೌಚಾಲಯದಿಂದ ಡಿ.ಸಿ. ಕಾಂಪೌಂಡ್‍ವರೆಗೆ ಬಲಭಾಗ ವಾಹನಗಳ ನಿಲುಗಡೆ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ಸೂಚಿಸಿರುತ್ತಾರೆ.
------------------

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.